ಶಬರಿಮಲೆ ವಿವಾದ: ಬಿಜೆಪಿ ಸಂಸದರ ಮನೆ ಮೇಲೆ ದಾಳಿ, ಕೇರಳ ಆರ್ ಎಸ್ಎಸ್ ಕಚೇರಿಗೆ ಬೆಂಕಿ

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿರುವ ಕೇರಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ಸಂಸದರ ಮನೆಗಳ ಮೇಲೆ ದಾಳಿ ಮಾಡಿ, ಆರ್ ಎಸ್ ಎಸ್ ಕಚೇರಿಗೆ ಬೆಂಕಿ ಹಾಕಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿರುವ ಕೇರಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ಸಂಸದರ ಮನೆಗಳ ಮೇಲೆ ದಾಳಿ ಮಾಡಿ, ಆರ್ ಎಸ್ ಎಸ್ ಕಚೇರಿಗೆ ಬೆಂಕಿ ಹಾಕಲಾಗಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ಮಾಡಿರುವುದರ ಹಿಂದೆ ಕೇರಳದ ಕಮ್ಯೂನಿಸ್ಟ್ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ಕೇರಳ ಬಿಜೆಪಿ ಘಟಕ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಕೇರಳದ ಹಿಂದೂಪರ ಸಂಘಟನೆಗಳು ಸಾಥ್ ನೀಡಿವೆ. ಏತನ್ಮಧ್ಯೆ ನಿನ್ನೆ ಬಿಜೆಪಿ ರ್ಯಾಲಿಗೆ ಕೆಲ ದುಷ್ಕರ್ಮಿಗಳು ಅಡ್ಡಿಪಡಿಸಿ ಬೈಕ್ ರ್ಯಾಲಿಯಲ್ಲಿ ಹೋಗುತ್ತಿದ್ದ ಕಾರ್ಯಕರ್ತರನ್ನು ಥಳಿಸಿದ್ದರು. ಈ ಘಟನೆ ಬಳಿಕ ಕೇರಳದಲ್ಲಿ ಹಿಂಸಾಚಾರ ಭುಗಿಲೆದಿದ್ದು, ಕೇರಳದ ಕಣ್ಣೂರಿನಲ್ಲಿರುವ ಆರ್ ಎಸ್ ಎಸ್ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅಂತೆಯೇ ಕೇರಳದಲ್ಲಿರುವ ಬಿಜೆಪಿ ಸಂಸದರ ಮೇನೆ ಮೇಲೂ ದಾಳಿಯಾಗಿದ್ದು, ದುಷ್ಕರ್ಮಿಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಮುರಳೀಧರನ್ ಅವರು, ತಳಸ್ಸೆರಿ ಬಳಿ ಇರುವ ವಡಿಲ್ ಪೀಡಿಕಿಯದಲ್ಲಿರುವ ತಮ್ಮ ಪೂರ್ವಜರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರಿಗೂ ಏನೂ ಆಗಿಲ್ಲ. ಆದರೆ ದಾಳಿ ವೇಳೆ ನನ್ನ ಸಹೋದರಿ ಮತ್ತು ನನ್ನ ಭಾವ ಮನೆಯಲ್ಲೇ ಇದ್ದರು. ನಾನು ಪ್ರಸ್ತುತ ಹೈದರಾಬಾದ್ ನಲ್ಲಿದ್ದೇನೆ ಎಂದು ಮುರಳೀಧರನ್ ಹೇಳಿದ್ದಾರೆ.
ಇದಕ್ಕೆ ಪ್ರತಿದಾಳಿ ಎಂಬಂತೆ ಕಮ್ಯೂನಿಸ್ಟ್ ಪಕ್ಷದ ಕಚೇರಿಗಳ ಮೇಲೆ ಕ್ರೂಡ್ ಬಾಂಬ್ ಗಳನ್ನು ಎಸೆಯಲಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಸಿಪಿಐಎಂ ಶಾಸಕ ಎಎನ್ ಶಂಸಿ ಅವರ ಮನೆ ಮತ್ತು ಕಚೇರಿಗಳ ಮೇಲೂ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಕೇರಳದಾದ್ಯಂತ ತೀವ್ರ ಕಟ್ಟೆಚ್ಚರ
ರಾಜ್ಯ ಪೊಲೀಸ್ ವರಿಷ್ಠ ಲೋಕನಾಥ್ ಬೆಹೆರ ನಿನ್ನೆ ಶಬರಿಮಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳುತ್ತೇವೆ. ಮಕರ ಜ್ಯೋತಿ ಸಮಯದಲ್ಲಿ ವಿಶೇಷ ಭದ್ರತೆ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಮಧ್ಯೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಶಬರಿಮಲೆ ಕರ್ಮ ಸಮಿತಿ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com