ನವದೆಹಲಿ: ಸರ್ಕಾರಿ ಅಧಿಕಾರಿಗೆ ಲಕ್ಷಾಂತರ ರು ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಮೂಲದ ಗಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.
2016ರಲ್ಲಿ ನೋಟು ಅಮಾನ್ಯೀಕರಣವಾದ ಸಂದರ್ಭದಲ್ಲಿ ಒಟ್ಟು 60 ಲಕ್ಷ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಶಿಖಾ ರಾಘವ್ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ 2 ವರ್ಷಗಳಿಂದಲೂ ಕೂಡ ಈಕೆಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಿ, ಕೊನೆಗೂ ಅರೆಸ್ಟ್ ಮಾಡಲಾಗಿದೆ. ಹರ್ಯಾಣದಲ್ಲಿ ಆಕೆ ನೆಲೆಸಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತೆರಳಿದ ಪೊಲೀಸರು ಆಕೆಯನ್ನು ಬಂಧಿಸಿ ದೆಹಲಿಗೆ ಕರೆತರಲಾಗಿದೆ ಎಂದು ಡಿಸಿಪಿ ನೂಪುರ್ ಪ್ರಸಾದ್ ಹೇಳಿದ್ದಾರೆ.
ಅಲ್ಲದೇ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ, ಆದರೆ ಆಕೆಯಿಂದ ಯಾವುದೇ ಹಣ ವಶ ಪಡಿಸಿಕೊಂಡಿಲ್ಲ, ಶಿಖಾ ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಹಲವು ಸಮಾರಂಭಗಳಲ್ಲಿ ಭಾಗವಹಿಸಿ ಹಾಡು ಹಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರ ಬಳಿಯಿಂದ ಅಮಾನ್ಯೀಕರಣಗೊಂಡ ನೋಟು ಪಡೆದು ಅದನ್ನು ಬದಲಿಸಿಕೊಡುವುದಾಗಿ ಹೇಳಿ ವಂಚಿಸಿದ್ದಾಳೆ ಎಂದು ಅಧಿಕಾರಿಯ ಕುಟುಂಬಸ್ಥರು ಆರೋಪಿಸಿದ್ದಾರೆ.