ಸಿಬಿಐ ಸಂಸ್ಥೆಗೆ ಬಾಹ್ಯ ಒತ್ತಡ ಅಪಾಯಕಾರಿ: ಕೊನೆಗೂ ಮೌನ ಮುರಿದ ಅಲೋಕ್ ವರ್ಮಾ

ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನ ಆಂತರಿಕ ಜಗಳ ಬೀದಿಗೆ ಬಿದ್ದು, ಕೇಂದ್ರ ಸರ್ಕಾರ ಮತ್ತು ಸಿಬಿಐ ಸಂಸ್ಥೆಯ ನಡುವಿನ ಮುಸುಕಿನ ಗುದ್ದಾಟ ಜಗಜ್ಜಾಹಿರಾಗಿರುವಂತೆಯೇ ಇದೇ ಮೊದಲ ಬಾರಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನ ಆಂತರಿಕ ಜಗಳ ಬೀದಿಗೆ ಬಿದ್ದು, ಕೇಂದ್ರ ಸರ್ಕಾರ ಮತ್ತು ಸಿಬಿಐ ಸಂಸ್ಥೆಯ ನಡುವಿನ ಮುಸುಕಿನ ಗುದ್ದಾಟ ಜಗಜ್ಜಾಹಿರಾಗಿರುವಂತೆಯೇ ಇದೇ ಮೊದಲ ಬಾರಿಗೆ ವಿವಾದ ಸಂಬಂಧ ನಿರ್ಗಮಿತ ಸಿಬಿಐ ಮುಖ್ಯಸ್ಖ ಅಲೋಕ್ ಕುಮಾರ್ ಮೌನ ಮುರಿದಿದ್ದಾರೆ.
ಕೋರ್ಟ್ ಆದೇಶದ ಬಳಿಕ ಸಿಬಿಐ ಸಂಸ್ಛೆಗೆ ವಾಪಸ್ ಆಗಿದ್ದ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಅಗ್ನಿಶಾಮಕ ದಳಕ್ಕೆ ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಇನ್ನು ಸರ್ಕಾರದ ಈ ನಿರ್ಧಾರಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಅಲೋಕ್ ವರ್ಮಾ ಅವರು, ಸಿಬಿಐ ಸಂಸ್ಥೆಗೆ ಬಾಹ್ಯ ಒತ್ತಡ ಎಂದಿಗೂ ಅಪಾಯಕಾರಿ. ಸಿಬಿಐ ಸಂಸ್ಥೆಯ ಸಮಗ್ರತೆ ಕಾಪಾಡಲು ಯತ್ನಿಸಿದ್ದೆ, ಆದರೆ ಓರ್ವ ವ್ಯಕ್ತಿಯ ಆರೋಪಕ್ಕೆ ನಾನು ಬಲಿಯಾದೆ ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಅವರು, 'ಸಿಬಿಐ ಮುಖ್ಯಸ್ಥನಾಗಿ ಆಯ್ಕೆಯಾದ ದಿನದಿಂದಲೂ ನಾನು ಸಂಸ್ಛೆಯ ಸಮಗ್ರತೆ ಕಾಪಾಡಲು ಪ್ರಯತ್ನಿಸಿದ್ದೆ, ದೇಶದ ಅತ್ಯುನ್ನತ ತನಿಖಾ ಸಂಸ್ಛೆ ಯಾವುದೇ ರೀತಿಯ ಬಾಹ್ಯ ಒತ್ತಡಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸಬೇಕು. ಆದರೆ ಕೆಲ ವ್ಯಕ್ತಿಗಳ ಸ್ವಹಿತಾಸಕ್ತಿಗೆ ನನ್ನ ಪ್ರಯತ್ನಗಳೆಲ್ಲವೂ ಬಲಿಯಾಯಿತು'.
ದುಃಖದ ವಿಚಾರವೆಂದರೆ ಕೇವಲ ಓರ್ವ ವ್ಯಕ್ತಿಯ ಸುಳ್ಳು ಆರೋಪಗಳಿಂದಾಗಿ ಕೇಂದ್ರ ಸರ್ಕಾರ ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿದೆ. ಆದರೆ ಇಲಾಖೆ ಯಾವುದೇ ಆದರೂ ನಾನು ನನ್ನ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ. ಮತ್ತೆ ಅವಕಾಶ ಸಿಕ್ಕರೆ ಖಂಡಿತಾ ಕೆಲಸ ಮಾಡಲು ಸಿದ್ಧ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರನ್ನು ಅಗ್ನಿ ಶಾಮಕ ದಳದ ಡಿಜಿ ಆಗಿ ವರ್ಗಾವಣೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com