ಸರ್ಕಾರ ರಚನೆಯ ಹಕ್ಕು ಮಂಡಿಸುತ್ತಿರುವ ಕಾಂಗ್ರೆಸ್
ದೇಶ
ಗೋವಾ: ಮತ್ತೆ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಕಾಂಗ್ರೆಸ್
ಗೋವಾದಲ್ಲಿ ಹೊಸ ಸರ್ಕಾರ ರಚಿಸುವ ಯತ್ನಿ ಮುಂದುವರೆಸಿರುವ ಕಾಂಗ್ರೆಸ್, ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ನಂತರ ಸೋಮವಾರ ಮತ್ತೆ ಸರ್ಕಾರ ರಚನೆಯ ಹಕ್ಕು ಮಂಡಿಸಿದೆ.
ಪಣಜಿ: ಗೋವಾದಲ್ಲಿ ಹೊಸ ಸರ್ಕಾರ ರಚಿಸುವ ಯತ್ನಿ ಮುಂದುವರೆಸಿರುವ ಕಾಂಗ್ರೆಸ್, ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ನಂತರ ಸೋಮವಾರ ಮತ್ತೆ ಸರ್ಕಾರ ರಚನೆಯ ಹಕ್ಕು ಮಂಡಿಸಿದೆ.
ಈ ಸಂಬಂಧ ಇಂದು ರಾಜ್ಯಪಾಲೆ ಮೃದುಲಾ ಸಿನ್ಹಾ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನ ಎಲ್ಲಾ 14 ಶಾಸಕರು, ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನ ಹೊಂದುತ್ತಿದ್ದಂತೆಯೇ, ರಾಜಕೀಯ ಅಸ್ಥಿರತೆ ತಲೆದೋರಿದ್ದ, ಸಾಧ್ಯತೆ ಇದೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಬಿಜೆಪಿ ಹಾಗೂ ಮಿತ್ರ ಪಕ್ಷದಲ್ಲಿ ಗೊಂದಲವಿದೆ. ಆದರೆ, ಪರ್ರಿಕರ್ ಅವರ ಅಂತ್ಯ ಸಂಸ್ಕಾರ ಆಗುವ ಮುನ್ನವೇ, ರಾಜ್ಯದಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸರ್ಕಾರ ರಚಿಸಲು ಹಕ್ಕು ಮಂಡನೆ ಪತ್ರ ಸಲ್ಲಿಸಿದ್ದು, ಅತೀವ ಟೀಕೆಗೆ ಗುರಿಯಾಗಿದೆ.
ರಾಜ್ಯಪಾಲರು ಭೇಟಿಗೆ ಅವಕಾಶ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಾವು ಎಲ್ಲಾ ಶಾಸಕರೊಂದಿಗೆ ರಾಜಭವನಕ್ಕೆ ತರೆಳಲು ನಿರ್ಧರಿಸಿದೆವು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ್ ಕವ್ಲೆಕರ್ ಅವರು ಹೇಳಿದ್ದಾರೆ.
ರಾಜ್ಯಪಾಲರಿಗೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಹಕ್ಕು ಪತ್ರ ನೀಡಿದ್ದು, ‘ಮನೋಹರ್ ಪರಿಕ್ಕರ್’ ಎಂಬ ‘ಫ್ಯಾಕ್ಟರ್’ಮೇಲೆ ಸರ್ಕಾರ ನಿಂತಿದ್ದು, ಇದೀಗ ಮುಖ್ಯಮಂತ್ರಿ ನಿಧನದಿಂದ ಅದು ಬಲ ಕಳೆದುಕೊಂಡಿದೆ. ಕಾಂಗ್ರೆಸ್ಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದೆ.
ಸದ್ಯ ಕಾಂಗ್ರೆಸ್ 14 ಶಾಸಕರೊಂದಿಗೆ ಅತಿ ದೊಡ್ಡ ಪಕ್ಷವಾಗಿದ್ದು, 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 12 ಶಾಸಕರನ್ನು ಹೊಂದಿದೆ. ಗೋವಾ ಫಾರ್ವರ್ಡ್, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ(ಎಂಜಿಪಿ) ತಲಾ ಮೂರು ಶಾಸಕರನ್ನು ಹೊಂದಿದ್ದು, ಎನ್ ಸಿಪಿ ಒಂದು ಹಾಗೂ ಪಕ್ಷೇತರ ಶಾಸಕರಿದ್ದಾರೆ.
ಕಳೆದ ಶನಿವಾರ ಸಹ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಕಾಂಗ್ರೆಸ್, ಇತ್ತೀಚಿಗೆ ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ ನಂತರ ಗೋವಾ ವಿಧಾನಸಭೆಯ ಸಂಖ್ಯಾಬಲ 40ರಿಂದ 37ಕ್ಕೆ ಕುಸಿದಿದ್ದು, ಬಹುಮತ ಕಳೆದುಕೊಂಡ ಬಿಜೆಪಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ರಾಜ್ಯಪಾಲರಿಗೆ ಒತ್ತಾಯಿಸಿದೆ. ಇದೀಗ ಪರಿಕ್ಕರ್ ನಿಧನದ ನಂತರ ಇಂದು ಮತ್ತೆ ಸರ್ಕಾರ ರಚನೆಯ ಹಕ್ಕು ಮಂಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ