ಮುಂಬೈ: ವಿದರ್ಭ ನೀರಾವರಿ ಹಗರಣದ ಪ್ರಮುಖ ಆರೋಪಿಯಾಗಿದ್ದ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ) ನಾಯಕ ಅಜಿತ್ ಪವಾರ್ ಗೆ ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಕ್ಲೀನ್ ಚಿಟ್ ನೀಡಿದೆ.
ಪ್ರಕರಣದ ಕುರಿತಂತೆ ಬಾಂಬೆ ಹೈಕೋರ್ಟ್ನಲ್ಲಿರುವ ನಾಗಪುರ ನ್ಯಾಯಪೀಠಕ್ಕೆ ಮಹಾರಾಷ್ಟ್ರ ಎಸಿಬಿ ಅಫಿಡವಿಟ್ ಸಲ್ಲಿಸಿದ್ದು, ವಿದರ್ಭ ಪ್ರದೇಶದಲ್ಲಿ ನಡೆದಿರುವ ನೀರಾವರಿ ಹಗರಣಗಳಲ್ಲಿ ಅಜಿತ್ ಪವಾರ್ ಪಾತ್ರವಿಲ್ಲ ಎಂದು ಅಫಿಡವಿಟ್ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ ಎನ್ನಲಾಗಿದೆ.
ಅಜಿತ್ ಪವಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಮಹಾರಾಷ್ಟ್ರದ ಅತ್ಯಂತ ಬರಪೀಡಿತ ಪ್ರದೇಶವಾದ ವಿದರ್ಬದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಯಾಗಿದ್ದವು. ಅವುಗಳಲ್ಲಿ ಅಜಿತ್ ಪವಾರ್ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿ ಎಸಿಬಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇನ್ನು ಈ ಹಿಂದಿನ ವಿಚಾರಣೆಯಲ್ಲಿ ಕೋರ್ಟ್ ಪ್ರಕರಣದಲ್ಲಿ ಅಜಿತ್ ಪವಾರ್ ಅವರ ಪಾತ್ರದ ಕುರಿತು ಎಸಿಬಿ ಅಧಿಕಾರಿಗಳನ್ನು ಪ್ರಶ್ನಿಸಿತ್ತು.
ಮಹಾರಾಷ್ಟ್ರದಲ್ಲಿ ಎನ್ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ ಮಹಾ ವಿಕಾಸ ಅಘಾಡಿ ಕೂಟ ಸರ್ಕಾರ ರಚನೆಯಾದ ನವೆಂಬರ್ 28ರ ಹಿಂದಿನ ದಿನ ನವೆಂಬರ್ 27 ರಂದು ಅಫಿಡವಿಟ್ ಸಲ್ಲಿಕೆಯಾಗಿದೆ.
Advertisement