ಸಿಎಎ ಪ್ರತಿಭಟನೆ: ಉತ್ತರ ಪ್ರದೇಶದಲ್ಲಿ ಬಿಗಿ ಭದ್ರತೆ, ಅರೆಸೇನಾ ಪಡೆ ನಿಯೋಜನೆ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಆಕ್ರೋಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 
ಉತ್ತರ ಪ್ರದೇಶದಲ್ಲಿ ಭದ್ರತೆ
ಉತ್ತರ ಪ್ರದೇಶದಲ್ಲಿ ಭದ್ರತೆ

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಆಕ್ರೋಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 

ಪ್ರಮುಖವಾಗಿ ಇಂದು ಅಂದರೆ  ಶುಕ್ರವಾರದ ಪ್ರಾರ್ಥನೆ ಕಾರಣ ಮುಂಜಾಗ್ರತೆಯಾಗಿ ಉತ್ತರ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಲಖನೌದಲ್ಲಿ ಅರೆಸೇನಾ ಪಡೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಉತ್ತರ ಪ್ರದೇಶದ ಮಸೀದಿಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ತುರ್ತು ಪ್ರಹಾರ ದಳ, ಅಶ್ರುವಾಯು ದಳಗಳನ್ನು ನಿಯೋಜಿಸಲಾಗಿದೆ.

ಸಿಎಎ ವಿರೋಧಿಸಿ ಕಳೆದ ಶುಕ್ರವಾರ ನಡೆದಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹೀಗಾಗಿ ಇಂದು ವ್ಯಾಪಕ ಭದ್ರತೆ ಒದಗಿಸಲಾಗಿದೆ. ಪ್ರಮುಖವಾಗಿ ಘಾಜಿಯಾಬಾದ್‌, ಬುಲಂದ್‌ ಶಹರ್‌, ಮೀರಠ್, ಮುಜಾಫರ್‌ನಗರ ಮತ್ತು ಶಾಮ್ಲಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಟರ್‌ನೆಟ್ ಸೇವೆಸ್ಥಗಿತಗೊಳಿಸಲಾಗಿದೆ. ಆಗ್ರಾದಲ್ಲಿಯೂ ಇಂಟರ್‌ನೆಟ್‌ ಸೇವೆ ಬೆಳಿಗ್ಗೆ 8 ರಿಂದ ಸಂಜೆ 6ರವರೆಗೂ ಇರುವುದಿಲ್ಲ ಎಂದು ಸ್ಥಳೀಯ ಜಿಲ್ಲಾಡಳಿತ ಹೇಳಿದೆ.

ಅಲ್ಲದೆ ಗೋರಖ್‌ಪುರದಲ್ಲಿ ಗುರುವಾರ ಸಂಜೆಯಿಂದಲೇ ಪೊಲೀಸರು ಪಥಸಂಚಲನ ನಡೆಸಿದ್ದು, ಅರೆಸೇನಾ ಪಡೆ ಜತೆಗೆ ಡ್ರೋಣ್ ಕ್ಯಾಮರಾಗಳನ್ನೂ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಭದ್ರತೆಗಾಗಿ ಉತ್ತರ ಪ್ರದೇಶದಲ್ಲಿ 15 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಲಾಗಿದ್ದು, 20 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಆಸ್ತಿ ಮುಟ್ಟುಗೋಲು: ಸಿಎಂ ಪುನರ್ ಎಚ್ಚರಿಕೆ
ಈ ಮಧ್ಯ, ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದಂತೆ ಕೃತ್ಯಗಳಲ್ಲಿ ಭಾಗಿಯಾದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯ ಚುರುಕುಗೊಳಿಸಲಾಗಿದೆ. 500ಕ್ಕೂ ಹೆಚ್ಚು ಮಂದಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಸಿಎಎ ವಿರೋಧಿಸಿ ಉತ್ತರ ಪ್ರದೇಶದ ಹಲವೆಡೆ ಕಳೆದ ವಾರದಿಂದ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಸುಮಾರು 19 ಜನ ಮೃತಪಟ್ಟಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com