ಅಟ್ಟಾರಿ: ಪಾಕಿಸ್ತಾನದಲ್ಲಿರುವ ಕರ್ತಾರ್ಪುರ ಗುರುನಾನಕ್ ಗುರುದ್ವಾರಕ್ಕೆ ಭೇಟಿ ನೀಡಲು ಪ್ರತಿ ದಿನ 5000 ಯಾತ್ರಿಗಳಿಗೆ ವೀಸಾ ರಹಿತ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಭಾರತ ಒತ್ತಾಯಿಸಿದೆ.
ಗಡಿಯಾಚೆಗಿನ ಕಾರ್ತಾಪುರ ಹಾಗೂ ಪಂಜಾಬಿನ ಗುರುದಾಸ್ ಪುರ ಜಿಲ್ಲೆಯ ನಡುವಿನ ಕಾರಿಡಾರ್ ನ ರೂಪುರೇಷೆ ಕುರಿತಂತೆ ಪಾಕಿಸ್ತಾನ ನಿಯೋಗದೊಂದಿಗೆ ಇಂದು ನಡೆದ ಚರ್ಚೆಯಲ್ಲಿ ಭಾರತ ಈ ಪ್ರಸ್ತಾವ ಮಂಡಿಸಿದೆ.
ಕರ್ತಾರ್ಪುರ ಗುರುನಾನಕ್ ಗುರುದ್ವಾರಕ್ಕೆ ಭೇಟಿ ನೀಡಲು ಪ್ರತಿ ದಿನ 5000 ಯಾತ್ರಿಗಳಿಗೆ ವೀಸಾ ರಹಿತ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಪಾಕಿಸ್ತಾನವನ್ನು ಒತ್ತಾಯಿಸಿರುವುದಾಗಿ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್ ಸಿಎಲ್ ದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಉದ್ಬವಿಸಿದ್ದ ಉದ್ರಿಕ್ತ ವಾತಾವರಣ ನಂತರ ಪಾಕಿಸ್ತಾನ ನಿಯೋಗ ಹಾಗೂ ಭಾರತದೊಂದಿಗೆ ನಡೆದ ಮೊದಲ ಸಭೆ ಇದಾಗಿದೆ.
ಸಿಖ್ ಧರ್ಮ ಸಂಸ್ಥಾಪಕ ಗುರು ನಾನಾಕ್ ದೇವ್ ತನ್ನ ಅಂತಿಮ ಜೀವನ ಕಳೆದ ಪವಿತ್ರ ಗುರುದ್ವಾರಕ್ಕೆ ಭಾರತೀಯರಿಗೂ ಸುಲಭ ಪ್ರವೇಶ ಕಲ್ಪಿಸಬೇಕೆಂದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು,ಯಾವುದೇ ವಿರಾಮ ಇಲ್ಲದೆ ವಾರಪೂರ್ತಿ ಯಾತ್ರಾರ್ಥಿಗಳ ಭೇಟಿಗೆ ಅವಕಾಶ ನೀಡುವಂತೆ ಪಾಕಿಸ್ತಾನವನ್ನು ಒತ್ತಾಯಿಸಿರುವುದಾಗಿ ಅವರು ತಿಳಿಸಿದ್ದಾರೆ.
ಭಾರತ ಸರಕಾರ ಯಾತ್ರಿಕರ ಭದ್ರತೆಗೆ ಆದ್ಯತೆ ನೀಡಿದೆ. ಕರ್ತಾರ್ಪುರ್ ಸಾಹೀಬ್ಗೆ ಭಕ್ತರ ಭೇಟಿ ಕುರಿತಂತೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಾಯಿತು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಉದ್ದೇಶಿತ ಒಪ್ಪಂದದಲ್ಲಿನ ವಿನಾಯಿತಿ ಹಾಗೂ ಪ್ರಮುಖ ಅಂಶಗಳ ಸಂಬಂಧ ಉಭಯ ದೇಶಗಳ ನಡುವೆ ರಚನಾತ್ಮಕ ಚರ್ಚೆ ನಡೆದಿದೆ. ಕರ್ತಾಪುರ್ ಕಾರಿಡಾರ್ ಕಾರ್ಯಾರಂಭ ನಿಟ್ಟಿನಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಮಹಾನಿರ್ದೇಶಕ ಮೊಹಮ್ಮದ್ ಫೈಸಲ್ ನೇತೃತ್ವದಲ್ಲಿನ ತಂಡ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಕರ್ತಾರ್ಪುರ್ ಸಾಹೀಬ್ ಕಾರಿಡಾರ್ ಯೋಜನೆಗೆ 50 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಿದೆ. ಎರಡು ಹಂತಗಳಲ್ಲಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ ಸಮುಚ್ಛಯವನ್ನು ನಿರ್ಮಿಸಲಾಗುವುದು, ಆ ಕಟ್ಟಡಗಳು ಹಸಿರು ಪರಿಸರದೊಂದಿಗೆ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಆಧರಿಸಿದ ಭಿತ್ತಿಚಿತ್ರಗಳನ್ನು ಹೊಂದಿರಲಿದೆ.
Advertisement