ನವದೆಹಲಿ: ಬಹುನಿರೀಕ್ಷಿತ ರಫೇಲ್ ಯುದ್ಧ ವಿಮಾನ ಭಾರತಕ್ಕೆ ವಿಜಯದಶಮಿ ದಿನವಾದ ಮಂಗಳವಾರ ಹಸ್ತಾಂತರಗೊಳ್ಳಲಿದ್ದು, ಈ ಬಾರಿ ಫ್ರಾನ್ಸ್ ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಯುಧಪೂಜೆಯನ್ನು ನೆರವೇರಿಸಲಿದ್ದಾರೆ.
ದಸರಾ ಶಸ್ತ್ರಪೂಜೆಗೆ ಹೆಸರಾಗಿದ್ದು, ರಕ್ಷಣಾ ಸಚಿವರು ವಿಜಯದಶಮಿಯ ದಿನವಾದ ನಾಳೆ ಆಯುಧ ಪೂಜೆಯನ್ನು ನೆರವೇರಿಸಲಿದ್ದಾರೆ.
ರಫೇಲ್ ಯುದ್ಧವಿಮಾನವನ್ನು ಸ್ವೀಕರಿಸುವ ರಾಜನಾಥ್ ಸಿಂಗ್ ಅವರು ಆಯುಧಪೂಜೆಯನ್ನೂ ಮಾಡಲಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿದ್ದ ವೇಳೆಯೂ ಆಯುಧ ಪೂಜೆ ಮಾಡುತ್ತಿದ್ದರು. ಈ ಬಾರಿ ಫ್ರಾನ್ಸ್'ನಲ್ಲಿದ್ದರೂ ಸಂಪ್ರದಾಯವನ್ನು ಮುಂದುವರೆಸಲಿದ್ದಾರೆ.
ವಿಮಾನ ಸ್ವೀಕರಿಸಿದ ಬಳಿಕ ರಫೇಲ್ ನಲ್ಲಿಯೇ ರಾಜನಾಥ್ ಅವರು ಹಾರಾಟ ನಡೆಸಲಿದ್ದಾರೆ. ಫ್ರೆಂಚ್ ಪೈಲಟ್ ಒಬ್ಬರು ರಾಜನಾಥ್ ಅವರನ್ನು ಹಿಂದಿನ ಸೀಟಿನಲ್ಲಿ ಕೂರಿಸಿ ರಫೇಲ್ ಹಾರಿಸಲಿದ್ದಾರೆ. ಭಾರತಕ್ಕೆ ರಷ್ಯಾ 36 ರಫೇಲ್ ಗಳನ್ನು ಹಸ್ತಾಂತರಿಸಬೇಕಿದ್ದು, ಮುಂದಿನ ದಿನಗಳಲ್ಲಿ ಬಾಕಿ 35 ವಿಮಾನಗಳನ್ನು ರವಾನೆಯಾಗಲಿವೆ.
ಅಕ್ಟೋಬರ್ 8ರಂದು ರಾಜನಾಥ್ ಫ್ರಾನ್ಸ್ ತಲುಪಲಿದ್ದು, ಆ ದಿನ ದಸರೆಯ ದಿನ ಹಾಗೂ ಭಾರತೀಯ ವಾಯುಪಡೆಯ ದಿನವೂ ಆಗಲಿದೆ.
Advertisement