ಮುಂಬೈ: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡು ನಿಭಾಯಿಸುತ್ತಿದ್ದ ಸಮಯದಲ್ಲಿ ಕೆಲವರು ಏಐಸಿಸಿ ಕಾರ್ಯಾಲಯದಲ್ಲಿ ಕುಳಿತುಕೊಂಡು ಅವರು ವಿಫಲಗೊಳ್ಳಲು ಪಿತೂರಿ ನಡೆಸಿದ್ದರು ಎಂದು ಹೇಳುವ ನೀಡುವ ಮೂಲಕ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ಸ್ವಪಕ್ಷೀಯ ಹಿರಿಯ ನಾಯಕರ ವಿರುದ್ದವೇ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಫ್ರಾನ್ಸ್ ನಲ್ಲಿ ರಫೆಲ್ ಯುದ್ಧ ವಿಮಾನ ಹಸ್ತಾಂತರ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡೆಸಿದ್ದ ಆಯುಧಪೂಜೆ ಒಂದು ತಮಾಷೆ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಸರಿಯಲ್ಲ ಎಂದೂ ಸಂಜಯ್ ನಿರುಪಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದಲ್ಲಿ ಆಯುಧ ಪೂಜೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ, ನಿಜವಾದ ಸಮಸ್ಯೆ ಏನೆಂದರೆ ಅವರು (ಖರ್ಗೆ) ನಾಸ್ತಿಕವಾಗಿರುವುದು ಕಾರಣ ಎಂದು ದೂರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲರೂ ನಾಸ್ತಿಕರೇನು ಅಲ್ಲ ಎಂದು ಅವರು ಮಾಧ್ಯಮಗಳಿಗೆ ನಿರುಪಮ್ ತಿಳಿಸಿದ್ದಾರೆ.
ಆಯುಧಪೂಜೆ ಕುರಿತು ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸಂಪ್ರದಾಯ ಪರಿಹಾಸ್ಯ ಮಾಡುತ್ತಿದೆ. ಆಯುಧ ಪೂಜೆ ಕಾಂಗ್ರೆಸ್ ಪಕ್ಷಕ್ಕೆ ಇಷ್ಟವಿಲ್ಲವೆಂದು ಕಾಣಿಸುತ್ತಿದೆ. ಕಾಂಗ್ರೆಸ್ ನಾಯಕರು ವಿಜಯದಶಮಿಯದಿನ ಆಯುಧಪೂಜೆ ಮಾಡುವುದಿಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ. ಸಂಪ್ರದಾಯಗಳ ಕುರಿತು ಟೀಕೆಗಳು ಸರಿಯಲ್ಲ, ಇಂತಹ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement