ನವದೆಹಲಿ: ಅಯೋಧ್ಯಾ ರಾಮಮಂದಿರ--ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿ ಬುಧವಾರ 40 ನೇ ಹಾಗೂ ಕಡೆಯ ದಿನದ ವಿಚಾರಣೆ ನಡೆಯಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಗೊಗೊಯ್ "ಇಂದು 39 ನೇ ದಿನ. ನಾಳೆ 40 ನೇ ದಿನ ಮತ್ತು ಪ್ರಕರಣದ ವಿಚಾರಣೆಯ ಕಡೆಯ ದಿನವಾಗಿರಲಿದೆ" ಎಂದಿದ್ದಾರೆ.
ನ್ಯಾಯಮೂರ್ತಿ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಪೀಠ 2010 ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸುತ್ತಿದೆ. ಇದು ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡಾ ಮತ್ತು ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಆದೇಶಿಸಿದೆ. 16 ನೇ ಶತಮಾನದ ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು ಕೆಡವಲಾಯಿತು.
ಅಕ್ಟೋಬರ್ 17ಕ್ಕೆ ನಿಗದಿಯಾದ ಕಡೆ ದಿನದ ವಿಚಾರಣೆಯನ್ನು ನಿಗದಿಗಿಂತ ತ ಒಂದು ದಿನ ಮುಂಚಿತವಾಗಿ ಮುಗಿಸುವುದಾಗಿ ಉನ್ನತ ನ್ಯಾಯಾಲಯ ಇತ್ತೀಚೆಗೆ ಹೇಳಿದೆ. ಪ್ರಕರಣದ ತೀರ್ಪು ನವೆಂಬರ್ 4-5ರಂದು ತೀರ್ಪು ನೀಡುವ ಸಾಧ್ಯತೆ ಇದೆ.
Advertisement