ಮದುರೈ: ದೇಶದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ತಮಿಳುನಾಡಿನ ಸತಾನ್ಕುಲಂ ಅಪ್ಪ-ಮಗ ಲಾಕಪ್'ಡೆತ್ ಪ್ರಕರಣದ ಅರೋಪಿಗಳಲ್ಲಿ ಒಬ್ಬರಾಗಿದ್ದ ಸ್ಪೆಷನ್ ಸಬ್ ಇನ್ಸ್'ಪೆಕ್ಟರ್ ಆಫ್ ಪೊಲೀಸ್ ಪೌಲ್'ದುರೈ ಅವರು ಕೊರೋನಾ ವೈರಸ್ ಸೋಂಕಿನಿಂದ ಬಲಿಯಾಗಿದ್ದಾರೆಂದು ಸೋಮವಾರ ವರದಿಗಳಿಂದ ತಿಳಿದುಬಂದಿದೆ.
ತಂದೆ ಮಗನ ಸಾವಿಗೆ ಕಾರಣರಾದ ಆರೋಪ ಹೊತ್ತಿರುವ 10 ಮಂದಿಯಲ್ಲಿ ಪೌಲ್ ದುರೈ ಕೂಡ ಒಬ್ಬರಾಗಿದ್ದರು, ಕೊರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಲಾಕ್ಡೌನ್ ವೇಳೆ ಅವಧಿ ಮೀರಿ ಅಂಗಡಿ ತೆರೆದಿದ್ದ ಹಿನ್ನೆಲೆಯಲ್ಲಿ ತಂದಿ ಹಾಗೂ ಮಗನನ್ನು ಕಸ್ಟಡಿಯಲ್ಲಿ ಇರಿಸಿಕೊಂಡಿದ್ದ ಪೊಲೀಸರು ಅವರ ಮೇಲೆ ದೌರ್ಜನ್ಯ ಎಸಗಿ ಸಾವಿಗೆ ಕಾರಣರಾಗಿದ್ದರು ಎಂದು ಹೇಳಲಾಗಿತ್ತುಯ ಪ್ರಕರಣ ಸಂಬಂಧ ಜುಲೈ.5ರಂದು ಪೌಲ್ ದುರೈ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು.
ಜುಲೈ 28 ರಂದು ಪೌಲ್ ಅವರಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಪೌಲ್ ಅವರ ಪತ್ನಿ ಮಂಗಯಾರ್ತಿಲಂಗಂ ಅವರು ಅರ್ಜಿ ಸಲ್ಲಿಸಿ, ಪತಿಯನ್ನು ತಮ್ಮ ಊರು ಕನ್ಯಾಕುಮಾರಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ಕರೆದೊಯ್ಯಲು ಅನುಮತಿ ನೀಡುವಂತೆ ಕೋರಿದ್ದರು,
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯಲ್ಲಿ ವಾರ ಕಳೆದರೂ ಯಾವುದೇ ಸುಧಾರಣೆಗಳೂ ಕಂಡಿಲ್ಲ. ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಳ್ಳುತ್ತಿದೆ. ಹೀಗಾಗಿ ಅವರಿಗೆ ಹೆಚ್ಚಿನ ಗುಣಮಟ್ಟದ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದರು. ಅನುಮತಿಗೆ ಮನವಿ ಮಾಡಿಕೊಂಡಿದ್ದ ನಡುವಲ್ಲೇ ಇದೀಗ ಪೌಲ್ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
Advertisement