ಮೆದುಳಿನ ಮಂಜು, ಶ್ವಾಸಕೋಶ ಊದಿಕೊಳ್ಳುವಿಕೆ; ಗುಣಮುಖವಾದರೂ ಬೆನ್ನ ಬಿಡದ ಕೊರೋನಾ ಆರೋಗ್ಯ ಸಮಸ್ಯೆಗಳು

ದೇಶಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಸೋಂಕಿನಿಂದ ಗುಣಮುಖರಾದವರಲ್ಲೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿರುವುದು ವೈದ್ಯ ಲೋಕಕ್ಕೆ ಹೊಸ ತಲೆನೋವು ತಂದಿಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚೆನ್ನೈ: ದೇಶಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಸೋಂಕಿನಿಂದ ಗುಣಮುಖರಾದವರಲ್ಲೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿರುವುದು ವೈದ್ಯ ಲೋಕಕ್ಕೆ ಹೊಸ ತಲೆನೋವು ತಂದಿಟ್ಟಿದೆ.

ಹೌದು.. ಕೊರೋನಾ ವೈರಸ್ ಸೋಂಕು ಪ್ರಕರಣಗಳು ಅಧಿಕವಾಗಿರುವ ನೆರೆಯ ತಮಿಳುನಾಡಿನಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ವಾಪಸ್ಸಾದ ಸಾಕಷ್ಟು ರೋಗಿಗಳಲ್ಲಿ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಈ  ಪಟ್ಟಿಗೆ ಮೆದುಳಿನ ಮಂಜು, ಶ್ವಾಸಕೋಶ ಊದಿಕೊಳ್ಳುವಿಕೆಯಂತಹ ಸಮಸ್ಯೆಗಳು ಸೇರಿಕೊಂಡಿದ್ದು, ಕೆಲ ರೋಗಿಗಳಲ್ಲಿ ಇದೇ ಸಮಸ್ಯೆ ಗಂಭೀರವಾಗಿ ಅವರು ಮತ್ತೆ ಆಸ್ಪತ್ರೆ ದಾಖಲಾದಂತಹ ಪ್ರಕರಣಗಳು ವರದಿಯಾಗುತ್ತಿವೆ. 

ಚೆನ್ನೈನ ಮಂಡವೇಲಿ ನಿವಾಸಿಯಾದ 32 ವರ್ಷದ ವಿಎನ್ ಅರುಣಾ ಎಂಬುವವರು ಜೂನ್ 6ರಂದು ಕೋವಿಡ್ ಗೆ ತುತ್ತಾಗಿದ್ದರು. ಆಸ್ಪತ್ರೆಗೆ ದಾಖಲಾದಾಗ ಕೊಂಚ ರೋಗಲಕ್ಷಣಗಳಿದ್ದವು. ಹೀಗಾಗಿ ಮನೆಯಲ್ಲಿ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಯ ಬಳಿಕ ಜೂನ್ 22ರಂದು ಅವರು ಗುಣಮುಖರಾಗಿದ್ದರು.  ಆದರೆ ಅವರ ಕೈಕಾಲುಗಳಲ್ಲಿ ವಿಪರೀತ ನೋವಿತ್ತು. ಕೊಂಚ ಕೆಲಸ ಮಾಡಿದರೂ ವಿಪರೀತ ಸುಸ್ತಾಗುತ್ತಿತ್ತು. ಇದಲ್ಲದೆ ಆಕೆಗೆ ಮೆದುಳಿನ ಮಂಜು ಸಮಸ್ಯೆ ಕೂಡ ಕಾಡಿತ್ತು. ಮೆದುಳಿಗೆ ಯಾರೋ ಹತ್ತಿಯನ್ನು ತುರುಕಿದಂತೆ ಭಾಸವಾಗುತ್ತಿತ್ತು. ತಲೆಯ ಸುತ್ತ ಮಬ್ಬು-ಮೋಡ ಕವಿದಂತೆ ಭಾಸುವಾಗುತ್ತಿತ್ತು ಎಂದು  ಹೇಳಿದ್ದಾರೆ. 

ಅಂತೆಯೇ ರೋಯಪುರಂನ 26 ವರ್ಷದ ಜಿ ವೆಂಕಟೇಶ್ ಅವರೂ ಕೂಡ ಸೋಂಕಿಗೆ ತುತ್ತಾಗಿ ಕೆಪಿ ಪಾರ್ಕ್ ನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದರು. ಬಳಿಕ ಗುಣಮುಖರಾಗಿದ್ದ ಅವರಿಗೆ ಕೆಲವೇ ದಿನಗಳ ಅಂತರದಲ್ಲಿ ತಲೆತಿರುಗುವಿಕೆ ಮತ್ತು ಮಬ್ಬುಗವಿಯುವಿಕೆಯಂತಹ ಸಮಸ್ಯೆ ಕಾಡಿತ್ತು. ಅಲ್ಲದೆ  ಮಧ್ಯಾಹ್ನದ ಸಂದರ್ಭದಲ್ಲಿ ಸ್ವಲ್ಪ ಜ್ವರಕೂಡ ಬರುತ್ತಿತ್ತು. ಪ್ರತೀದಿನ ಬೆಳಗ್ಗೆ ಏಳುವಾಗ ನನಗೆ ಅಲ್ಪ ಪ್ರಮಾಣದ ಜ್ವರ ಇರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಶ್ವಾಸಕೋಶ ಸಮಸ್ಯೆ, ಹೃದಯದ ತೊಂದರೆಗಳು ಇತರೆ ಆರೋಗ್ಯ ತೊಂದರೆಗಳು
ಇನ್ನು ಮೆದುಳಿನ ಮಂಜು, ಶ್ವಾಸಕೋಶ ಊದಿಕೊಳ್ಳುವಿಕೆ ಮಾತ್ರವಲ್ಲದೇ ಸಾಕಷ್ಟು ಗುಣಮುಖರಾದ ರೋಗಿಗಳಲ್ಲಿ ಶ್ವಾಸಕೋಶ ಸಮಸ್ಯೆ, ಹೃದಯದ ತೊಂದರೆಗಳು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳೂ ಕೂಡ ಎದುರಾಗುತ್ತಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಾವೇರಿ ಆಸ್ಪತ್ರೆಯ  ನುರಿತ ವೈದ್ಯೆ, ಡಾ. ಬಿ ವಿಜಯಲಕ್ಷ್ಮಿ ಅವರು ಸೋಂಕಿನಿಂದ ಗುಣಮುಖರಾದ ಸಾಕಷ್ಟು ರೋಗಿಗಳಲ್ಲಿ ಮೆದುಳಿನ ಮಂಜು, ಶ್ವಾಸಕೋಶ ಊದಿಕೊಳ್ಳುವಿಕೆ, ಶ್ವಾಸಕೋಶ ಸಮಸ್ಯೆ, ಹೃದಯದ ತೊಂದರೆಗಳು ಕಾಣಿಸಿಕೊಂಡಿವೆ. ಇದಲ್ಲದೆ ಇತರೆ ಸಮಸ್ಯೆಗಳೂ ಕೂಡ ಕಂಡುಬಂದಿದೆ. ಶ್ವಾಸಕೋಶದ ಹೊರ  ಪದರಗಳು ಹಾನಿಗೀಡಾದಾಗ ಸಾಮಾನ್ಯವಾಗಿಯೇ ಶ್ವಾಸಕೋಶ ಊದುವಿಕೆಯ ಸಮಸ್ಯೆಗಳು ಆರಂಭವಾಗುತ್ತವೆ. ನಿಜಕ್ಕೂ ಇದೊಂದು ಆಘಾತಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ಶ್ವಾಸಕೋಶದ ಚೇತರಿಕೆ ಸಾಮರ್ಥ್ಯ ಕುಗ್ಗುವ ಅಪಾಯವಿರುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com