ದೀಪಾವಳಿಯ ವೇಳೆಗೆ ಕೊರೋನಾ ಸೋಂಕು ನಿಯಂತ್ರಣ: ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್

ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ವಿಶ್ವಾಸ ಹೊಂದಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಡಾ. ಹರ್ಷವರ್ಧನ್
ಡಾ. ಹರ್ಷವರ್ಧನ್

ಬೆಂಗಳೂರು: ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ವಿಶ್ವಾಸ ಹೊಂದಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ಅನಂತಕುಮಾರ್ ಪ್ರತಿಷ್ಠಾನ ನಗರದಲ್ಲಿ ಆಯೋಜಿಸಿದ್ದ ದೇಶ ಮೊದಲು ವೆಬಿನಾರ್ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಕೋವಿಡ್ ಸೋಂಕನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸುತ್ತಾ ಬಂದಿದೆ. 

ಸೋಂಕು ದೇಶಕ್ಕೆ ಕಾಲಿಡುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದರು. ಫೆಬ್ರವರಿ ಮೊದಲ ವಾರದಲ್ಲಿ ಕೇವಲ ಪುಣೆಯಲ್ಲಿ 1 ಪ್ರಯೋಗಾಲಯ ಇದ್ದದ್ದು ಇಂದು 1582ಕ್ಕೆ ಹೆಚ್ಚಾಗಿದೆ. 1000 ಕ್ಕೂ ಹೆಚ್ಚು ಸರಕಾರಿ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದು, ಇದೀಗ ಪ್ರತಿದಿನ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು.

ಕೋವಿಡ್ ಪ್ರಾರಂಭದ ಸಮಯದಲ್ಲಿ ಪಿಪಿಇ ಕಿಟ್ ಗಳು, ಎನ್ 95 ಮಾಸ್ಕ್ ಗಳು ಹಾಗೂ ವೆಂಟಿಲೇಟರ್ ಗಳ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಪ್ರಸ್ತುತ ಪ್ರತಿ ದಿನ 5 ಲಕ್ಷ ಪಿಪಿಇ ಕಿಟ್ ಉತ್ಪಾದನೆ ಮಾಡಲಾಗುತ್ತಿದೆ. 

ದೇಶದ 10 ಜನ ಉತ್ಪಾದಕರು ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ, 25 ಉತ್ಪಾದಕರು ವೆಂಟಿಲೇಟರ್ ಗಳನ್ನು ತಯಾರಿಸುತ್ತಿದ್ದಾರೆ. ಇದೀಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಪಿಪಿಇ ಕಿಟ್ ಗಳು, ಎನ್ 95 ಹಾಗೂ ವೆಂಟಿಲೇಟರ್ ಗಳ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಪ್ರಸ್ತುತ ಪ್ರತಿ ದಿನ 5 ಲಕ್ಷ ಪಿಪಿಇ ಕಿಟ್ ಉತ್ಪಾದನೆ ಮಾಡಲಾಗುತ್ತಿದೆ. ದೇಶದ 10 ಜನ ಉತ್ಪಾದಕರು ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ, 25 ಉತ್ಪಾದಕರು ವೆಂಟಿಲೇಟರ್ ಗಳನ್ನು ತಯಾರಿಸುತ್ತಿದ್ದಾರೆ. ಇದೀಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಪಿಪಿಇ ಕಿಟ್ ಗಳು,  ಎನ್ 95 ಹಾಗೂ ವೆಂಟಿಲೇಟರ್ ಗಳ ಕೊರತೆ ನೀಗಿದೆ ಎಂದು ಹೇಳಿದರು.ದೇಶದಲ್ಲಿ ಏಳು ಕರೋನಾ ಲಸಿಕೆ ಪ್ರಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಅದರಲ್ಲಿ ಮೂರು ಕ್ಲಿನಿಕಲ್ ಹಂತದಲ್ಲಿದ್ದು, ನಾಲ್ಕು ಪ್ರಿ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿವೆ. ಈ ವರ್ಷದ ಕೊನೆಯಲ್ಲಿ ಲಸಿಕೆ ದೊರೆಯುವ ಸಾಧ್ಯತೆ ಇದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಕಾರಣದಿಂದಾಗಿ ನಾವು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಅಲ್ಲದೆ, ಇದಕ್ಕೆ ದೇಶದ ವೈಜ್ಞಾನಿಕ ಸಮುದಾಯ ಹಾಗೂ ಕರೋನಾ ವಾರಿಯರ್ ಗಳ ಕೊಡುಗೆ ಬಹಳಷ್ಟಿದೆ. ದೇಶಕ್ಕೆ ಭೇಟಿ ನೀಡಿದ್ದ ಹಾರ್ವರ್ಡ್ ಹಾಗೂ ಪ್ರಮುಖ ಸಂಶೋಧನಾ ತಜ್ಞರು ಜೂನ್  ತಿಂಗಳಲ್ಲಿ 300 ದಶಲಕ್ಷಕ್ಕೂ ಹೆಚ್ಚು ಸೋಂಕಿತರು ಹಾಗೂ ಆರು ದಶಲಕ್ಷ ಸಾವು ಸಂಭವಿಸಲಿವೆ ಎಂದು ಹೇಳಿದ್ದರು. ಆದರೆ, ನಾವೀಗ ಆಗಸ್ಟ್ ತಿಂಗಳ ಕೊನೆಯಲ್ಲಿದ್ದು ಒಟ್ಟು ಕರೋನಾ ಪ್ರಕಣಗಳು 3.5 ದಶಲಕ್ಷ ದಷ್ಟಿದ್ದು, ಈ ಪೈಕಿ 2.7 ದಶಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನುಳಿದವರು ರೋಗದಿಂದ  ಗುಣಮುಖರಾಗುವ ಹಂತದಲ್ಲಿದ್ದಾರೆ. ವಿಶ್ವದ ಬೇರೆ ಯಾವುದೇ ದೇಶಕ್ಕಿಂತಲೂ ನಾವು ಕರೋನಾ ಸೋಂಕನ್ನು ಅತ್ಯುತ್ತಮ ಒಳ್ಳೆಯ ರೀತಿಯಲ್ಲಿ ನಿಭಾಯಿಸಿದ್ದು, ನಮ್ಮ ಮರಣ ಪ್ರಮಾಣ ಶೇ 1.8 ರಷ್ಟಿದೆ ಎಂದರು.

ನಮ್ಮ ದೇಶ ಈಗಾಗಲೇ ಕರೋನಾ ವೈರಸ್ ವಿರುದ್ದ ಹೋರಾಡುವುದನ್ನು ಹಾಗೂ ಅದರ ಜೊತೆ ಬದುಕುವುದನ್ನು ಕಲಿತಿದೆ. ಪೊಲೀಯೋ, ಸಿಡುಬು ಮತ್ತಿತರ ವ್ಯಾದಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿರುವ ಹಾಗೂ ಎಬೋಲಾ ವೈರಸ್ಸ್ ನ್ನು ದೇಶಕ್ಕೆ ಕಾಲಿಡದಂತೆ, ನಿಫಾ ವೈರಸನ್ನು ಕೇರಳ ರಾಜ್ಯದಲ್ಲೇ  ನಿಭಾಯಿಸಿದಂತಹ ಇತಿಹಾಸ ಹೊಂದಿದ್ದೇವೆ. ಭಾರತ ದೇಶ ಕರೋನಾ ವನ್ನು ಬಹಳ ಓಳ್ಳೆಯ ರೀತಿಯಲ್ಲಿ ನಿಭಾಯಿಸಲಿದೆ. ಈ ಹಿನ್ನಲೆಯಲ್ಲಿ ಮುಂಬರುವ ದೀಪಾವಳಿ ಹಬ್ಬದ ಹೊತ್ತಿಗೆ ಕರೋನಾ ಸಾಂಕ್ರಾಮಿಕ ರೋಗದ ಮೇಲೆ ನಿಯಂತ್ರಣ ಸಾಧಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮಾತನಾಡಿ, ಕೋವಿಡ್ ಕಾರಣ ರಾಜ್ಯದ ಹಲವಾರು ಕ್ಷೇತ್ರಗಳು ತೊಂದರೆ ಅನುಭವಿಸಿವೆ. ಅವುಗಳನ್ನು ಸರಿದಾರಿಗೆ ತರುವ ಉದ್ದೇಶದಿಂದ ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ನಾವು ಕೋವಿಡ್ ಪರಿಸ್ಥಿತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದೇವೆ. ಭೂಸುಧಾರಣೆ, ಏಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ಹೊಸ ಕೈಗಾರಿಕಾ ನೀತಿ, ಕೈಗಾರಿಕಾ ಸೌಲಭ್ಯ ಕಾಯಿದೆ, ಬಂಡವಾಳ ಹೂಡಿಕೆಗೆ ನೀತಿ ನಿಯಮಗಳ ಸಡಲಿಕೆ ಹೀಗೆ ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.

ರಾಜ್ಯದಲ್ಲಿರುವ ಕೌಶಲ್ಯಕ್ಕೆ ಒಳ್ಳೆಯ ಅವಕಾಶ ನೀಡುವ ಉದ್ದೇಶ ಹಾಗೂ ರಾಜ್ಯವನ್ನು ಉತ್ಪಾದನಾ ಹಬ್ ಆಗಿ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಹಾಗೂ ಸುಧಾರಣೆಯನ್ನು ಮಾಡುತ್ತಿದ್ದೇವೆ. ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿಯೂ ನಮ್ಮ ಸರಕಾರ ಕೈಗೊಂಡ ಕ್ರಮಗಳು ದೇಶಕ್ಕೆ  ಮಾದರಿಯಾಗಿವೆ. ಸಿಇಟಿ ಪರೀಕ್ಷೆ ನಡೆಸಿದ್ದು ಬಹಳ ಪ್ರಶಂಸೆಗೆ ಕಾರಣವಾಗಿದೆ ಎಂದು ಹೇಳಿದರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಕರೋನಾ ಸಾಂಕ್ರಾಮಿಕ ಸೋಂಕು ಸಾಕಷ್ಟು ಪಾಠಗಳನ್ನು ಕಲಿಸಿದೆ. ರಾಜ್ಯ ಸರಕಾರ ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದ್ದೇವೆ. ಮುಂದಿನ ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ಸಂಖ್ಯೆ ಏರಿಕೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ನಾರಾಯಣ ಹೆಲ್ತ್ ನ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ.ದೇವಿ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರ ದೇಶದ ಆರೋಗ್ಯ ವ್ಯವಸ್ಥೆಯ ನೀತಿ ನಿಯಮಗಳಲ್ಲಿ ಕೈಗೊಂಡಿರುವ ಬದಲಾವಣೆಗಳಿಂದ ಎಲ್ಲಾ ಸಮುದಾಯದ ಜನರಿಗೂ ಸುಲಭವಾಗಿ ಆರೋಗ್ಯ ವ್ಯವಸ್ಥೆ ದೊರೆಯಲಿದೆ ಎಂದು ಹೇಳಿದರು. ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅನಂತಕುಮಾರ್ ಪ್ರತಿಷ್ಠಾನದ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಪ್ರತಿಷ್ಠಾನವು ಅನಂತಕುಮಾರ್ ರಾಷ್ಟ್ರೀಯ ನಾಯಕತ್ವ ಮತ್ತು ನೀತಿ ನಿರೂಪಣೆ ಸಂಸ್ಥೆಯನ್ನು ಆರಂಭಿಸುವ ಉದ್ದೇಶ ಹೊಂದಿದೆ. ಇದರಲ್ಲಿ ನಾಯಕತ್ವ ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ಮತ್ತು ಸಂಶೋಧನೆ ಕೈಗೊಳ್ಳಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಿದೆ. ಉದ್ದೇಶಿತ ಸಂಸ್ಥೆಯ ಆರಂಭಕ್ಕೆ ಪೂರಕವಾಗಿ ವೆಬಿನಾರ್ ಸಂವಾದಗಳ ಸರಣಿಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಯುವ ಆಂದೋಲನದ ಸಂಸ್ಥಾಪಕ ಮತ್ತು ನಾಯಕತ್ವ ತರಬೇತುದಾರರಾದ ಡಾ.ಬಾಲಸುಬ್ರಮಣ್ಯಂ ಹಾಗೂ ಹಲವಾರು ರಾಜಕಾರಣಿಗಳು “ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿನ ನಾಯಕತ್ವ”ದ ಬಗ್ಗೆ ವಿವರವಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು. ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು  ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಡಾ.ಬಿ.ಎಸ್.ಶ್ರೀನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com