ನವದೆಹಲಿ: ಸರ್ಕಾರ ಮಾತುಕತೆಗೆ ಬಯಸಿದ್ದರೆ ಅದನ್ನು ಔಪಚಾರಿಕವಾಗಿ ಈ ಹಿಂದಿನಂತೆ ತಿಳಿಸಬೇಕು ಎಂದು ಭಾರತೀಯ ಕಿಸಾನ್ ಸಂಘಟನೆ ನಾಯಕ ರಾಕೇಶ್ ಟಿಕೈಟ್ ಹೇಳಿದ್ದಾರೆ.
ನೂತನ ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವುದು ಬಿಟ್ಟರೆ ಬೇರೆ ಯಾವುದೇ ಸಂಧಾನಕ್ಕೆ, ಬದಲಾವಣೆಗೆ ನಾವು ಸಿದ್ದವಿಲ್ಲ ಎಂದು ಹೇಳಿದ್ದಾರೆ.
ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪವನ್ನು ಪರಿಗಣಿಸಬೇಕೆಂದು ಸರ್ಕಾರ ರೈತ ಸಂಘಟನೆಗಳನ್ನು ಕಳೆದ ಗುರುವಾರ ಮನವಿ ಮಾಡಿಕೊಂಡಿತ್ತು. ರೈತ ಸಂಘಟನೆಗಳು ಯಾವಾಗ ಬಯಸಿದರೂ ಕೂಡ ಮುಕ್ತವಾಗಿ ಮಾತುಕತೆಗೆ ಸಿದ್ದ ಎಂದು ಕೂಡ ಸರ್ಕಾರ ಹೇಳಿತ್ತು.
ನಮ್ಮನ್ನು ಯಾವಾಗ ಮತ್ತು ಎಲ್ಲಿ ಭೇಟಿ ಮಾಡಲು ಸರ್ಕಾರ ಬಯಸುತ್ತದೆ ಎಂದು ನಮಗೆ ಮೊದಲು ಹೇಳಬೇಕು. ನಮ್ಮನ್ನು ಮಾತುಕತೆಗೆ ಆಹ್ವಾನಿಸಿದರೆ ನಾವು ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಟಿಕೈಟ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸರ್ಕಾರ ಮೂರು ನೂತನ ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವವರೆಗೆ ಪ್ರತಿಭಟನೆ ನಿಲ್ಲಿಸಿ ವಾಪಸ್ ಮನೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಮುಂದಿನ ಮಾತುಕತೆಗೆ ಸರ್ಕಾರ ಆಹ್ವಾನ ಕಳುಹಿಸಿದೆಯೇ ಎಂದು ಕೇಳಿದಾಗ ಇಲ್ಲ, ರೈತ ಸಂಘಟನೆಗಳಿಗೆ ಇದುವರೆಗೆ ಸರ್ಕಾರದ ಕಡೆಯಿಂದ ಯಾವುದೇ ಆಹ್ವಾನ, ಪ್ರಸ್ತಾಪ ಬಂದಿಲ್ಲ ಎಂದಿದ್ದಾರೆ.
Advertisement