ಪತಂಜಲಿಯ ಕೊರೋನಿಲ್ ಔಷಧಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ: ಬಾಬಾ ರಾಮ್ ದೇವ್

ಕೊರೊನಾ ಸೋಂಕು ನಿವಾರಣೆಗಾಗಿ ಪತಂಜಲಿ ಸಂಸ್ಥೆ ಸಿದ್ದಪಡಿಸಲಾಗಿರುವ ಕೊರೊನಿಲ್​ ಔಷಧಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ದೇಶದ ಮೂಲೆ ಮೂಲೆಯಲ್ಲೂ ಕೊರೊನಿಲ್ ಲಭ್ಯವಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್
Updated on

ನವದೆಹಲಿ: ಕೊರೊನಾ ಸೋಂಕು ನಿವಾರಣೆಗಾಗಿ ಪತಂಜಲಿ ಸಂಸ್ಥೆ ಸಿದ್ದಪಡಿಸಲಾಗಿರುವ ಕೊರೊನಿಲ್​ ಔಷಧಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ದೇಶದ ಮೂಲೆ ಮೂಲೆಯಲ್ಲೂ ಕೊರೊನಿಲ್ ಲಭ್ಯವಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಕೊರೋನಿಲ್ ಔಷಧದ ದೃಢೀಕರಣ ಮತ್ತು ಅದರ ಅಧಿಕೃತ ಅಸ್ತಿತ್ವದ ಕುರಿತು ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್ ದೇವ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಅವರು, 'ಇಲ್ಲಿ ಅನೇಕರು ಆಯುರ್ವೇದ ವಿರೋಧಿಗಳಿದ್ದಾರೆ. ಹಾಗಾಗಿಯೇ ಕೊರೊನಾಕ್ಕೆ ಆಯುರ್ವೇದ ಔಷಧಿ ಕಂಡುಹಿಡಿದಿದ್ದೇವೆ ಎಂದರೆ ಒಪ್ಪುತ್ತಿಲ್ಲ. ನನ್ನನ್ನು ಜೈಲಿಗೆ ಕಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಈಗಾಗಲೇ ಎಫ್​ಐಆರ್​ ಕೂಡ ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

'ಕೆಲವರಿಗೆ ನನ್ನ ಬಗ್ಗೆ ತೀವ್ರ ಅಸಮಾಧಾನ ಇರಬಹುದು. ಆದರೆ ನನ್ನ ಮೇಲಿನ ದ್ವೇಷವನ್ನು ಕೊರೋನಾ ಸೋಂಕಿತರ ಮೇಲೆ ತೀರಿಸಿಕೊಳ್ಳಬಾರದು. ಕೊರೋನಾ ಸಾಂಕ್ರಾಮಿಕ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕು. ಕೊರೊನಾ ನಿವಾರಣೆಗಾಗಿ ನಾವು ಔಷಧಿ ಕಂಡುಹಿಡಿದಿದ್ದೇವೆ ಎಂಬ ಮಾತ್ರಕ್ಕೆ ಅದನ್ನು ಇಷ್ಟರ ಮಟ್ಟಿಗೆ ವಿರೋಧಿಸಬಾರದು. ನಮ್ಮ ಈ ಕೊರೊನಾ ಮ್ಯಾನೇಜ್​ಮೆಂಟ್​ ನಿರ್ದೇಶನದಲ್ಲಿ ಔಷಧಿ ಕಂಡು ಹಿಡಿದ ಪತಂಜಲಿ ಸಂಸ್ಥೆಯನ್ನು ಆಯುಷ್​ ಇಲಾಖೆ ಶ್ಲಾಘಿಸಿದೆ. ಪತಂಜಲಿ ಹಾಗೂ ಆಯುಷ್​ ಇಲಾಖೆಯ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಬಾಬಾ ರಾಮ್ ದೇವ್ ಸ್ಪಷ್ಟಪಡಿಸಿದರು.

ಅಲ್ಲದೆ ಕೊರೊನಿಲ್ ಔಷಧಿಯ​​ನ್ನು ಕ್ಲಿನಿಕಲ್​ ಟ್ರಯಲ್​​ಗೆ ಒಳಪಡಿಸಿದ್ದೇವೆ. ಒಟ್ಟು ಪ್ರಯೋಗಕ್ಕೆ ಒಳಗಾದ ಕೊರೋನಾ ರೋಗಿಗಳ ಪೈಕಿ ಶೇ.69 ಮಂದಿ ಮೂರೇ ದಿನಗಳಲ್ಲಿ ಗುಣಮುಖರಾಗಿದ್ದಾರೆ. ಅಂತೆಯೇ ಶೇ.100 ರೋಗಿಗಳು ಏಳು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಕ್ಲಿನಿಕಲ್​ ಟ್ರಯಲ್​​ನ ದಾಖಲೆಗಳನ್ನು ನಾವು ಆಯುಷ್​ ಇಲಾಖೆಗೆ ನೀಡಿದ್ದೇವೆ. ಈ ಮೂಲಕ ಮನುಷ್ಯನ ದೇಹದೊಳಗೆ ಕೊರೋನಾ ಉಂಟು ಮಾಡುವ ಹಾನಿಯನ್ನು ಕೊರೊನಿಲ್​ ನಿಯಂತ್ರಿಸುತ್ತದೆ ಎಂಬುದು ನಮ್ಮ ಪ್ರಯೋಗದಿಂದ ಗೊತ್ತಾಗಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.

ನಾವು ಅನೇಕ ರೋಗಗಳಿಗೆ ಆಯುರ್ವೇದದಿಂದಲೇ ಔಷಧಿ ಕಂಡುಹಿಡಿಯಲು ಕೆಲಸ ಮಾಡುತ್ತಿದ್ದೇವೆ. ನಮ್ಮೊಂದಿಗೆ ಸುಮಾರು 500 ವಿಜ್ಞಾನಿಗಳ ತಂಡವಿದೆ. ಹೆಪಟೈಟಿಸ್​, ಅಸ್ತಮಾಕ್ಕೂ ನಮ್ಮ ಬಳಿ ಔಷಧಿಯಿದೆ. ಅಂತೆಯೇ ಕೊರೊನಿಲ್​ನ್ನು ಕೂಡ ನೈಸರ್ಗಿಕವಾಗಿ, ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಈ ಕೊರೊನಿಲ್​ ಇಂದಿನಿಂದಲೇ  ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಕೊರೋನಾ ವೈರಸ್ ಚಿಕಿತ್ಸೆಗಾಗಿ ಕೊರೊನಿಲ್​ ಎಂಬ ಔಷಧಿ ಕಂಡು ಹಿಡಿದಿದ್ದ ಪತಂಜಲಿ ಸಂಸ್ಥೆ ನೂರೆಂಟು ಅಡೆತಡೆಗಳನ್ನು ಎದುರಿಸುತ್ತಿದೆ. ಮಾತ್ರೆಗಳ ಮಾರಾಟಕ್ಕೆ ಆಯುಷ್​ ಇಲಾಖೆ ಅವಕಾಶ ಕೊಡಲಿಲ್ಲ. ಕೆಲವು ರಾಜ್ಯಸರ್ಕಾರಗಳೂ ಅದನ್ನು ವಿರೋಧಿಸಿದವು. ಅಷ್ಟೇ ಅಲ್ಲ ಸಂಸ್ಥೆ ಮುಖ್ಯಸ್ಥ ಬಾಬಾ ರಾಮ್​​​ದೇವ್​, ಸಿಸಿಒ ಆಚಾರ್ಯ ಬಾಲಕೃಷ್ಣ ವಿರುದ್ಧ ಎಫ್ಐಆರ್​ ಕೂಡ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com