ನವದೆಹಲಿ: ಕಾರ್ಗಿಲ್ ವಿಜಯ ದಿವಸಕ್ಕೆ ಭಾನುವಾರ 21ನೇ ವರ್ಷಾಚರಣೆ ಸಂಭ್ರಮ. ದೇಶದ ರಕ್ಷಣೆ, ಭದ್ರತೆ, ಐಕ್ಯತೆಯನ್ನು ಎತ್ತಿಹಿಡಿದು ಕಾಪಾಡುವಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹುತಾತ್ಮ ಯೋಧರನ್ನು ನೆನೆಯುವ ದಿನ ಇಂದು.
ಪಾಕಿಸ್ತಾನ ಸೇನೆ 1999ರಲ್ಲಿ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಭಾರತದ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತ್ತು. ಆಕ್ರಮಣ ಮಾಡಲು ಬಂದ ಪಾಕಿಸ್ತಾನ ಸೇನೆ ವಿರುದ್ಧ ಭಾರತೀಯ ಸೇನೆಗೆ ಯುದ್ಧ ಮಾಡದೆ ಬೇರೆ ದಾರಿಯಿರಲಿಲ್ಲ. ಆಗ ಕೇಂದ್ರ ಸರ್ಕಾರ ಆಪರೇಷನ್ ವಿಜಯವನ್ನು ಘೋಷಿಸಿತ್ತು. ಎರಡೂವರೆ ತಿಂಗಳ ಕಾಲ ಕಾರ್ಗಿಲ್ ನಲ್ಲಿ ಯುದ್ಧ ನಡೆದು ಕೊನೆಗೆ ಭಾರತೀಯ ಸೇನೆ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟುವಲ್ಲಿ ಜುಲೈ 29, 1999ರಂದು ಯಶಸ್ವಿಯಾಯಿತು. ಆ ದಿನದ ವಿಜಯವನ್ನು ಮತ್ತು ಭಾರತೀಯ ಸೈನಿಕರು ತ್ಯಾಗ, ಬಲಿದಾನಗಳನ್ನು ನೆನೆಯಲು ಪ್ರತಿವರ್ಷ ಜುಲೈ 26ನ್ನು ಕಾರ್ಗಿಲ್ ವಿಜಯ್ ದಿವಸ ಎಂದು ಆಚರಿಸಲಾಗುತ್ತದೆ.
ಕಾರ್ಗಿಲ್ ಯುದ್ಧ ಆರಂಭವಾಗಿದ್ದು 1999ರ ಮೇ 3ರಂದು, ಕಾರ್ಗಿಲ್ ಪರ್ವತ ಶ್ರೇಣಿಯ ಮೇಲೆ ಆಕ್ರಮಣ ಮಾಡಲು ಬಂದ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಲು ಭಾರತೀಯ ಸೇನೆ ದಾಳಿಗೆ ನಿಂತಿತು. ಪಾಕಿಸ್ತಾನ 1998ರಿಂದಲೂ ದಾಳಿ ಮಾಡಲು ಹೊಂಚು ಹಾಕುತ್ತಿತ್ತು. ಆದರೆ ತಮಗೆ ಈ ಯುದ್ಧದ ಬಗ್ಗೆ ಗೊತ್ತೇ ಇರಲಿಲ್ಲ. ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೇಳುವವರೆಗೂ ತಮಗೆ ದಾಳಿಯ ಬಗ್ಗೆ ಅರಿವಿರಲಿಲ್ಲ ಎಂದು ಅಂದಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ಕೊಟ್ಟಿದ್ದರು.
ಅಂದು ಕಾರ್ಗಿಲ್ ವಿಜಯ ದಿವಸದ ಹಿಂದಿನ ದಿನ ಅಂದರೆ ಜೂನ್ 25ರಂದು ಆಪರೇಷನ್ ವಿಜಯದ ಅಂತಿಮ ಜಯ ಸಿಕ್ಕಿತ್ತು ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.
ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೆನಸಿಕೊಂಡಿದ್ದಾರೆ.ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಕಾರ್ಗಿಲ್ ವಿಜಯ ದಿವಸ ಭಾರತದ ಹೆಮ್ಮೆ, ಶೌರ್ಯ, ಸಾಹಸ, ಅಚಲ ನಾಯಕತ್ವದ ಪ್ರತೀಕ ಎಂದು ಟ್ವೀಟ್ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್,21ನೇ ಕಾರ್ಗಿಲ್ ವಿಜಯ ವರ್ಷಾಚರಣೆ ಸಂದರ್ಭದಲ್ಲಿ, 1999ರಲ್ಲಿ ಅಂದಿನ ಕಠಿಣ ಪರಿಸ್ಥಿತಿಯಲ್ಲಿ ಭಾರತ ಸೇನೆಯ ಪರವಾಗಿ ಹೋರಾಡಿ ವೀರ ಮರಣ ಹೊಂದಿದ ಯೋಧರನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಈ ದಿನ ಇತಿಹಾಸದಲ್ಲಿ ಅಚ್ಛಳಿಯದೆ ಉಳಿಯುವಂಥದ್ದು ಎಂದು ಹೇಳಿದ್ದಾರೆ.
ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಂದು ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯಕ್ ಮತ್ತು ಮೂರೂ ಸೇನೆಗಳ ಮುಖ್ಯಸ್ಥರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
Advertisement