ಗಲ್ವಾನ್ ಕಣಿವೆ ಸಂಘರ್ಷ: ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ವಿರೋಧ ಪಕ್ಷಗಳ ಆಗ್ರಹ, ಬಿಜೆಪಿ ನಕಾರ
ನವದೆಹಲಿ: ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ರಾತ್ರಿ ಎರಡೂ ದೇಶಗಳ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸಭೆಯನ್ನು ಆದಷ್ಟು ಶೀಘ್ರದಲ್ಲಿ ಕರೆಯಬೇಕೆಂದು ವಿರೋಧ ಪಕ್ಷಗಳ ಹಲವು ನ್ಯಾಯ ತಜ್ಞರ ತಂಡ ಒತ್ತಾಯಿಸಿವೆ.
ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯ ಸಭೆ ಕರೆದು ವಿದೇಶಾಂಗ ಕಾರ್ಯದರ್ಶಿಗಳು, ರಕ್ಷಣಾ ಇಲಾಖೆ ಕಾರ್ಯದರ್ಶಿಗಳು ಮತ್ತು ಇತರ ಉನ್ನತ ಮಟ್ಟದ ನಾಯಕರು ಗಡಿಯಲ್ಲಿ ಏನು ನಡೆಯಿತು, ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ವಾಸ್ತವ ಸಂಗತಿಗಳನ್ನು ದೇಶದ ಜನತೆ ಮುಂದೆ ಬಹಿರಂಗಪಡಿಸಬೇಕೆಂದು ತಂಡ ಒತ್ತಾಯಿಸಿವೆ.
ಕಳೆದ 45 ವರ್ಷಗಳಲ್ಲಿ ಭಾರತ-ಚೀನಾ ಮಧ್ಯೆ ನಡೆದ ಸಂಘರ್ಷದಲ್ಲಿ ಇದು ಅತ್ಯಂತ ಘನ ಘೋರ ಘಟನೆಯಾಗಿದ್ದು 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಬಳಿಕ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆಸಬೇಕೆಂದು ಹಲವು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ನ್ಯಾಯ ತಜ್ಞರ ತಂಡದ ಸದಸ್ಯರಾಗಿರುವ ಆರ್ ಎಸ್ ಪಿ ಸಂಸದ ಎನ್ ಕೆ ಪ್ರೇಮಚಂದ್ರನ್, ಭಾರತ-ಚೀನಾ ಸೈನ್ಯ ನಿಲುಗಡೆ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಸಭೆ ಕರೆಯಬೇಕೆಂದು ಒತ್ತಾಯಿಸಿದ್ದಾರೆ. ಇದು ದೇಶದ ಹಿತಾಸಕ್ತಿಗೆ ಸಂಬಂಧಪಟ್ಟ ವಿಷಯ, ವಿದೇಶಾಂಗ ಕಾರ್ಯದರ್ಶಿಗಳು ಮತ್ತು ರಕ್ಷಣಾ ಇಲಾಖೆ ಕಾರ್ಯದರ್ಶಿಗಳನ್ನು ಕರೆದು ಸಂಘರ್ಷದ ಬಗ್ಗೆ ವಿವರಣೆ ಕೊಡಿಸಬೇಕು ಎಂದು ಪ್ರೇಮಚಂದ್ರನ್ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
ಮಾಜಿ ಸಚಿವ ಪಿ ಚಿದಂಬರಂ ಕೂಡ, ಘಟನೆ ಬಗ್ಗೆ ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳಿಂದ ಮಾಹಿತಿಯನ್ನು ದೇಶದ ಜನತೆ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ಆಡಳಿತ ಪಕ್ಷದ ನ್ಯಾಯ ತಜ್ಞರ ತಂಡ ಈ ಬೇಡಿಕೆ ರಾಜಕೀಯ ಕೃತ್ಯವಾಗಿದ್ದು, ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಟೀಕಿಸಿವೆ. ಕೊರೋನಾ ವೈರಸ್ ಸಮಸ್ಯೆಯಿರುವ ಸಂದರ್ಭದಲ್ಲಿ ಇಂತಹ ಸಭೆಗಳನ್ನು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಸಮಿತಿಗೆ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಪಿಪಿ ಚೌಧರಿ ಅಧ್ಯಕ್ಷರಾಗಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲಾ ಪಕ್ಷಗಳು ರಾಜಕೀಯ ಮಾಡುವುದನ್ನು ದೂರವಿಟ್ಟು ಸರ್ಕಾರದ ಜೊತೆ ನಿಲ್ಲಬೇಕು, ಚೀನಾ ಮುಂದೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಒತ್ತಾಯಿಸಿದ್ದಾರೆ. ಸಮಿತಿ ಸದಸ್ಯೆ ಬಿಜೆಪಿಯ ಪೂನಂ ಮಹಾಜನ್, ಕೊರೋನಾ ವೈರಸ್ ಸಮಯದಲ್ಲಿ ಲೋಕಸಭೆ ಸಚಿವಾಲಯದಲ್ಲಿ ಸಂಸದೀಯ ಸ್ಥಾಯಿ ಸಮಿತಿ ಸಭೆ ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಮಧ್ಯೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಸಾಧ್ಯವಿದೆಯೇ ಎಂದು ಪರಿಶೀಲಿಸುವಂತೆ ಲೋಕಸಭಾಧ್ಯಕ್ಷ ಓಂ ಪ್ರಕಾಶ್ ಬಿರ್ನಾ ಮತ್ತು ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಪ್ರಧಾನ ಕಾರ್ಯದರ್ಶಿಗಳಿಗೆ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ