ತಿರುಮಲದಲ್ಲಿ ಶಂಕಿತ ಸೋಂಕಿತನ ಪ್ರವೇಶ: ತಿಮ್ಮಪ್ಪನ ದೇಗುಲ ಸ್ವಚ್ಛತಾ ಕಾರ್ಯಕ್ಕೆ ಮುಸ್ಲಿಂ ಭಕ್ತನ ಸಾಥ್, ಸ್ಪ್ರೇಯರ್ ಕೊಡುಗೆ!
ತಿರುಪತಿ: ಖ್ಯಾತ ಧಾರ್ಮಿಕ ಯಾತ್ರಾ ತಾಣ ತಿರುಪತಿ ತಿರುಮಲ ದೇಗುಲಕ್ಕೆ ಕೊರೋನಾ ವೈರಸ್ ಸೋಂಕಿತ ಶಂಕಿತ ವ್ಯಕ್ತಿ ಪ್ರವೇಶ ಮಾಡಿರುವ ಬೆನ್ನಲ್ಲೇ ದೇಗುಲ ಆಡಳಿತ ಮಂಡಳಿ ಟಿಟಿಡಿ, ದೇಗುಲದ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಈ ಕಾರ್ಯಕ್ಕೆ ಮುಸ್ಲಿಂ ಭಕ್ತರೊಬ್ಬರು ಸಾಥ್ ನೀಡಿದ್ದಾರೆ.
ಹೌದು..ತಿರುಮಲ ಪರಿಸರವನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ಸಿಂಪಡಿಸುವ ಸ್ಪ್ರೇಯರ್ನ್ನು ಮುಸ್ಲಿಂ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಗೆ ಕೊಡುಗೆಯಾಗಿ ನೀಡಿದ್ದಾರೆ. ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತರಾಗಿರುವ ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ಎಂಬವರು 2.6 ಲಕ್ಷ ರೂ ಮೌಲ್ಯದ ಸ್ಪ್ರೇಯರ್ ನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಟ್ರ್ಯಾಕ್ಟರ್ ನಲ್ಲಿರಿಸಿ ಸಿಂಪಡಣೆ ಮಾಡುವ ಈ ಸ್ಪ್ರೇಯರ್ನಿಂದ ದೇಗುಲದ ಆವರಣದಲ್ಲಿರುವ ರಸ್ತೆಯ ಸುತ್ತಮುತ್ತಲ ಪ್ರದೇಶವನ್ನು ವೈರಾಣು ಮುಕ್ತ ಮಾಡಲಾಗುತ್ತಿದೆ.
ಮೂಲಗಳ ಪ್ರಕಾರ ಘನಿ ಅವರು ಈ ಹಿಂದೆಯೂ ಇದೇ ರೀತಿಯ ಕೊಡುಗೆ ನೀಡಿದ್ದರು. ನಾಲ್ಕು ವರ್ಷಗಳ ಹಿಂದೆ ಇವರು ಟಿಟಿಡಿಯ ನಿತ್ಯ ಅನ್ನದಾನ (ಉಚಿತ ಊಟ) ಸೇವೆಗೆ ತರಕಾರಿಗಳನ್ನು ಕೊಂಡೊಯ್ಯಲು ಹವಾನಿಯಂತ್ರಿತ ಟ್ರಕ್ ಗಳನ್ನು ನೀಡಿದ್ದರು. ಈ ಕುರಿತಂತೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉದ್ಯಮಿ ಘನಿ, ದೇವಾಲಯಕ್ಕೆ ಏನಾದರೂ ಅಗತ್ಯ ಇದೆ ಎಂಬುದು ನನ್ನ ಗಮನಕ್ಕೆ ಬಂದರೆ ನಾನು ನೀಡುತ್ತೇನೆ. ದೇವರ ಸೇವೆಗಾಗಿ ನನಗೆ ಪ್ರಚಾರ ಬೇಡ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ