ಪಾಲ್ಘರ್ ಸಾಧುಗಳ ಹತ್ಯೆ ಪ್ರಕರಣ: ಬಂಧಿತ 115 ವ್ಯಕ್ತಿಗಳ ಪೈಕಿ ಓರ್ವನಲ್ಲಿ ಕೊರೋನಾ ಪತ್ತೆ, 23 ಪೊಲೀಸರು ಕ್ವಾರಂಟೈನ್'ಗೆ
ಪಾಲ್ಘರ್: ಮಹಾರಾಷ್ಟ್ರ ರಾಜ್ಯದ ಪಾಲ್ಘರ್ ನಲ್ಲಿ ಇಬ್ಬರು ಸಾಧುಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 115 ಮಂದಿ ಆರೋಪಿಗಳ ಪೈಕಿ ಇದೀಗ ಓರ್ವ ವ್ಯಕ್ತಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದ ಎಂದು ಶನಿವಾರ ತಿಳಿದುಬಂದಿದೆ.
ಸಾಧುಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಅಪ್ರಾಪ್ತರು ಸೇರಿದಂತೆ 115 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಇದೀಗ 115 ಮಂದಿಯ ಪೈಕಿ ಓರ್ವ ವ್ಯಕ್ತಿಯಲ್ಲಿ ಶುಕ್ರವಾರ ವೈರಸ್ ದೃಢಪಟ್ಟಿದೆ.
ಪ್ರಸ್ತುತ ಸೋಂಕು ಪತ್ತೆಯಾಗಿರುವ ವ್ಯಕ್ತಿಯನ್ನು ಪೊಲೀಸ್ ಠಾಣೆಯಲ್ಲಿ 20 ಮಂದಿಯ ಜೊತೆಗೆ ಇರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಸೋಂಕಿತ ವ್ಯಕ್ತಿಯನ್ನು ಪಾಲ್ಘರ್ ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಜೊತೆಗಿದ್ದ 20 ಮಂದಿಯನ್ನೂ ಹಾಗೂ 23 ಮಂದಿ ಪೊಲೀಸರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪೊಲೀಸರು ಹುಡುಕಲು ಆರಂಭಿಸಿದ್ದಾರೆ. ಅಲ್ಲದೆ. ವ್ಯಕ್ತಿಗೆ ಸೋಂಕು ಹೇಗೆ ತಗುಲಿತು ಎಂಬುದರ ಕುರಿತಂತೆಯೂ ಅಲ್ಲಿನ ಆರೋಗ್ಯ ಇಲಾಖೆ ಪತ್ತೆ ಹಚ್ಚಲು ಕಾರ್ಯ ಆರಂಭಿಸಿದೆ.
ಏಪ್ರಿಲ್ 16 ರಂದು ಪಾಲ್ಘರ್ ನಲ್ಲಿ ಸಾಧುಗಳನ್ನು ಹತ್ಯೆ ಮಾಡಲಾಗಿತ್ತು, ಅಂತ್ಯಸಂಸ್ಕಾರವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಬ್ಬರು ಸಾಧುಗಳು ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಸೂರತ್ ನಿಂದ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಗ್ರಾಮಸ್ಥರು ಕಾರನ್ನು ತಡೆದಿದ್ದು, ಸಾಧುಗಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಘಟನೆಗೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ