ಕರೀಮ್ ನಗರ: ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ತೆಲಂಗಾಣದ ಓರ್ವ ವ್ಯಕ್ತಿ ತನ್ನ ಹೆತ್ತ ತಾಯಿಯನ್ನೇ ಮನೆಯಿಂದ ಹೊರಗೆ ಇಟ್ಟಿದ್ದಾನೆ.
ಹೌದು.. ದೇಶಾದ್ಯಂತ ಮಾರಕ ಕೊರೋನಾ ವೈರಸ್ ಇಳಿ ವಯಸ್ಸಿನವರನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ ಹಿರಿಯರಿಗೆ ಬೆಂಬಲವಾಗಿ ನಿಲ್ಲಬೇಕಿದ್ದ ಮಗನೇ ವೈರಸ್ ಭೀತಿಯಿಂದಾಗಿ ತನ್ನ ತಾಯಿಯನ್ನೇ ಮನೆಯಿಂದ ಹೊರಗೆ ಇಟ್ಟಿದ್ದಾನೆ. ತೆಲಂಗಾಣದ ಕರೀಮ್ ನಗರದ ಕಿಸಾನ್ ನಗರದಲ್ಲಿ ಈ ಘಟನೆ ನಡೆದಿದ್ದು, ಸಂಬಂಧಿಕರ ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಶೋಲಾಪುರಕ್ಕೆ ತೆರಳಿ ಬಳಿಕ ಮನೆಗೆ ವಾಪಸ್ ಆಗಿದ್ದ 80 ವರ್ಷ ವಯಸ್ಸಿನಿ ಇಳಿ ವಯಸ್ಸಿನ ತಾಯಿಯನ್ನು ಆಕೆಯ ಮಗ ಮನೆಗೆ ಸೇರಿಸಿದೇ ವಿಕೃತಿ ಮೆರೆದಿದ್ದಾನೆ.
ಮೂಲಗಳ ಪ್ರಕಾರ ಶೋಲಾಪುರಕ್ಕೆ ತೆರಳಿದ್ದ ಅಜ್ಜಿ ಕಟ್ಟ ಶ್ಯಾಮಲ ಎನ್ನುವವರು ಲಾಕ್ ಡೌನ್ ಸಡಿಲಿಕೆ ಬಳಿಕ ಕಾರಿನಲ್ಲಿ ಹೈದರಾಬಾದ್ ಗೆ ಬಂದಿದ್ದರು. ಈ ವೇಳೆ ಅಜ್ಜಿ ಕರೀಮ್ ನಗರ್ ಗೆ ಬಸ್ ನಲ್ಲಿ ಬಂದಿದ್ದರು. ರಾಜ್ಯ ಸರಹದ್ದಿನಲ್ಲಿ (ಗಡಿ) ಅಧಿಕಾರಿಗಳು ಈ ಅಜ್ಜಿ ಕೈಗೆ ಹೋಮ್ ಕ್ವಾರಂಟೈನ್ ಸೀಲ್ ಹಾಕಿದ್ದಾರೆ. ಅದೇ ಸೀಲ್ ನೊಂದಿಗೆ ಅಜ್ಜಿ ಮನೆಗೆ ಬಂದಿದ್ದು, ಇದನ್ನು ಕಂಡ ಮಗ ನರಸಿಂಹಚಾರಿ ಎಂಬಾತ ತಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳದೇ ಮನೆ ಗೇಟ್ ಗೆ ಬೀಗ ಹಾಕಿದ್ದಾನೆ. ಅಲ್ಲದೆ ಅಜ್ಜಿಯ ಕಿರಿಯ ಪುತ್ರ ಕೂಡ ಆಕೆಯನ್ನು ಮನೆಗೆ ಸೇರಿಸಿಲ್ಲ.
ಹೀಗಾಗಿ ಅಜ್ಜಿ ಅನಿವಾರ್ಯವಾಗಿ ಮನೆಯ ಗೇಟ್ ಮುಂದೆಯೇ ಕುಳಿತುಕೊಳ್ಳುವಂತಾಗಿತ್ತು. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮತ್ತು ದಾರಿಹೋಕರು ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮಗಳು ಗರ್ಭಿಣಿ. ಆಕೆ ಮನೆಯಲ್ಲಿದ್ದು, ಆಕೆಗೆ ವೈರಸ್ ಹರಡಬಹದು ಎಂದು ವಾದಿಸಿದ. ಈ ವೇಳೆ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯ ಕಾರ್ಪೋರೇಟರ್ ಅಡ್ಲ ಸರಿತಾ ಅವರ ಪತಿ ಅಶೋಕ್ ಅಜ್ಜಿಯ ಪುತ್ರರೊಂದಿಗೆ ಮಾತನಾಡಿದ್ದಾರೆ. ಬಳಿಕ ಸಮಾಧಾನಗೊಳಿಸಿ ಅಜ್ಜಿಯನ್ನು ಮನೆಯೊಳಗೆ ಬಿಟ್ಟಿದ್ದಾರೆ.
Advertisement