ಕಾಂಗ್ರೆಸ್ ನಲ್ಲಿ ಶಶಿ ತರೂರ್ ‘ಅತಿಥಿ ಕಲಾವಿದ’ನಿದ್ದಂತೆ: ಕೋಡಿಕ್ಕುನ್ನಿಲ್ ಸುರೇಶ್
ತಿರುವನಂತಪುರ: ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರ ಪಟ್ಟಿಯಲ್ಲಿರುವ ಶಶಿ ತರೂರ್ ಕಾಂಗ್ರೆಸ್ ಪಕ್ಷದಲ್ಲಿ ‘ಅತಿಥಿ ಕಲಾವಿದ’ನಿದ್ದಂತೆ ಎಂದು ಕೆಪಿಸಿಸಿ (ಕೇರಳ) ಕಾರ್ಯಾಧ್ಯಕ್ಷ, ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಕೋಡಿಕ್ಕುನ್ನಿಲ್ ಸುರೇಶ್ ಶುಕ್ರವಾರ ಹೇಳಿದರು.
ನಾಯಕತ್ವಕ್ಕೆ ಸಂಬಂಧಿಸಿದಂತೆ ಬದಲಾವಣೆಗೆ ಆಗ್ರಹಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಅವರದ್ದೇ ಪಕ್ಷದಲ್ಲಿ ಬಂಡಾಯ ಭುಗಿಲೆದ್ದಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮುಖಂಡರ ಗುಂಪಿನಲ್ಲಿ ಇದ್ದ ಸಂಸದ ಶಶಿ ತರೂರ್ ವಿರುದ್ಧ ಕೇರಳ ರಾಜ್ಯ ಕಾಂಗ್ರೆಸ್ ನಾಯಕರೇ ಕಿಡಿಕಾರಲಾರಂಭಿಸಿದ್ದಾರೆ.
ಕೆಪಿಸಿಸಿ (ಕೇರಳ) ಕಾರ್ಯಾಧ್ಯಕ್ಷ, ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಕೋಡಿಕ್ಕುನ್ನಿಲ್ ಸುರೇಶ್ ಅವರು, ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರ ಪಟ್ಟಿಯಲ್ಲಿರುವ ಶಶಿ ತರೂರ್ ಕಾಂಗ್ರೆಸ್ ಪಕ್ಷದಲ್ಲಿ ‘ಅತಿಥಿ ಕಲಾವಿದ’ನಿದ್ದಂತೆ ಎಂದು ಟೀಕಿಸಿದ್ದಾರೆ. ಅಲ್ಲದೆ 'ಪಕ್ಷದೊಳಗಿರುವ ಎಲ್ಲರೂ ಪಕ್ಷದ ನೀತಿ ನಿಯಮದಂತೆ ಕಾರ್ಯನಿರ್ವಹಿಸಬೇಕು. ಶಶಿ ತರೂರ್ ಖಂಡಿತವಾಗಿಯೂ ಒಬ್ಬ ರಾಜಕಾರಣಿ ಅಲ್ಲ. ಅವರು ಅತಿಥಿ ಕಲಾವಿದರಾಗಿ ಪಕ್ಷಕ್ಕೆ ಬಂದರು. ತರೂರ್ ಜಾಗತಿಕ ನಾಗರಿಕರಾಗಿರಬಹುದು. ಆದರೆ, ತನ್ನಿಚ್ಚೆಗೆ ತಕ್ಕಂತೆ ಏನೂ ಹೇಳಬಹುದು ಎಂದು ಯೋಚಿಸುವುದು ತಪ್ಪು. ಅಲ್ಲದೆ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ಪಕ್ಷದ ನೀತಿ ನಿಯಮಾವಳಿಗಳನ್ನು ತಪ್ಪದೇ ಅನುಸರಿಸಬೇಕು ಎಂದು ಹೇಳಿದರು
ಸುರೇಶ್ ಹೇಳಿಕೆಗೆ ಕೆಲ ಹಿರಿಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ತರೂರ್ ಅವರನ್ನು ತೆರೆಗೆ ಸರಿಸಲು ನಡೆಸಲಾಗುತ್ತಿರುವ ಪ್ರಯತ್ನ ಎಂದು ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಕೆಪಿಸಿಸಿ ಉಪಾಧ್ಯಕ್ಷ ವಿಡಿ ಸತೀಶನ್ ಅವರು, ಶಶಿತರೂರ್ ನಮ್ಮ ಎದುರಾಳಿಯಲ್ಲ. ಶಶಿ ತರೂರ್ ನಮ್ಮ ಸಂಸದರು. ಪಕ್ಷದ ಕಾರ್ಯಕರ್ತರಿಗೆ ಅವರು ಮಾರ್ಗದರ್ಶನ ನೀಡಬೇಕು. ಆದರೆ ಇಂತಹ ಬೆಳವಣಿಗೆ ಯಾವುದೇ ಪಕ್ಷಕ್ಕಾದರೂ ಉತ್ತಮವಲ್ಲ ಎಂದು ಹೇಳಿದ್ದಾರೆ.