ಹೈದರಾಬಾದ್; ಹೈದರಾಬಾದ್ ನಗರ ಪಾಲಿಕೆಗಳಿಗೆ ನಡೆದ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬೀಳಲಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಒಟ್ಟು 150 ವಾರ್ಡ್'ಗಳ ಜಿಹೆಚ್ಎಂಸಿ ಚುನಾವಣೆಗೆ ಡಿ.1 ರಂದು ಮತದಾನ ನಡೆದಿತ್ತು. ಕೊರೋನಾ ಹಿನ್ನೆಲೆಯಲ್ಲಿ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗಿತ್ತು.
ಚುನಾವಣಾ ಕಣದಲ್ಲಿ ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 30 ಮತ ಎಣಿಕೆ ಕೇಂದ್ರಗಳಲ್ಲಿ 8,152 ಸಿಬ್ಬಂದಿ ಮತ ಎಣಿಕೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಬಾರಿಯ ಚುನಾವಣೆಯನ್ನು ಬಿಜೆಪಿ ಹಾಗೂ ಟಿಆರ್'ಎಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಇದರಂತೆ ಬಿಜೆಪಿಯ ಘಟಾನುಘಟಿ ನಾಯಕರು ಹೈದರಾಬಾದ್ ನಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಜ್ಯದ ಸಚಿವರಾದ ಸುಧಾಕರ್, ಈಶ್ವರಪ್ಪ ಸೇರಿದಂತೆ ಹಲವಾರು ನಾಯಕರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಚಾರದ ವೇಳೆ ಬಿಜೆಪಿ ನಾಯಕರು ಹೈದರಾಬಾದ್ ಅನ್ನು ಭಾಗ್ಯನಗರವಾಗಿ ಮರುನಾಮಕರಣ ಮಾಡುವ ವಿಚಾರ, ಹೈದರಾಬಾದ್'ನ್ನು ನಿಜಾಮ ಸಂಸ್ಕೃತಿಯಿಂದ ಹೊರತರುವ ಹೇಳಿಕೆಗಳು ಈ ಬಾರಿಯ ಚುನಾವಣೆಯು ಭಾರೀ ಕುತೂಹಲ ಕೆರಳಿಸುವಂತೆ ಮಾಡಿವೆ. ಚುನಾವಣಾ ಅಖಾಡದಲ್ಲಿ ಟಿಆರ್'ಎಸ್ (ತೆಲಂಗಾಣ ರಾಷ್ಟ್ರ ಸಮಿತಿ), ಬಿಜೆಪಿ, ಕಾಂಗ್ರೆಸ್ ಇಳಿದಿವೆ.
Advertisement