ಉತ್ತರ ಪ್ರದೇಶದ ಗ್ರಾಮ ಪಂಚಾಯಿತಿಗೆ ಪಾಕ್ ಮಹಿಳೆ ಮುಖ್ಯಸ್ಥೆ; ಎಫ್ಐಆರ್ ದಾಖಲು!

ಉತ್ತರ ಪ್ರದೇಶದ ಗ್ರಾಮ ಪಂಚಾಯಿತಿಗೆ ಪಾಕಿಸ್ತಾನಗ ಮೂಲದ ಮಹಿಳೆ ಮುಖ್ಯಸ್ಥೆಯಾಗಿದ್ದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಿಳೆ ವಿರುದ್ಧ ಇದೀಗ ಪೊಲೀಸ್ ಎಫ್ ಐಆರ್ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಉತ್ತರ ಪ್ರದೇಶದ ಗ್ರಾಮ ಪಂಚಾಯಿತಿಗೆ ಪಾಕಿಸ್ತಾನಗ ಮೂಲದ ಮಹಿಳೆ ಮುಖ್ಯಸ್ಥೆಯಾಗಿದ್ದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಿಳೆ ವಿರುದ್ಧ ಇದೀಗ ಪೊಲೀಸ್ ಎಫ್ ಐಆರ್ ದಾಖಲಾಗಿದೆ.

ಹೌದು.. ಉತ್ತರ ಪ್ರದೇಶದ ಇಟಾ ನಗರದಲ್ಲಿ ಈ ಘಟನೆ ನಡೆದಿದ್ದು, 35 ವರ್ಷಗಳ ಹಿಂದೆ ಸಂಬಂಧಿಕರ ಮದುವೆಗೆಂದು ಬಂದಿದ್ದ ಬಾನೋ ಬೇಗಂ ಎಂಬ ಮಹಿಳೆಯೊಬ್ಬರು ಬಳಿಕ ಪಾಕಿಸ್ತಾನಕ್ಕೆ ವಾಪಸ್ ಆಗಿರಲಿಲ್ಲ. ಬಳಿಕ ಇಲ್ಲಿನ ವ್ಯಕ್ತಿಯೊಬ್ಬರನ್ನೇ ಮದುವೆಯಾಗಿ ಇಲ್ಲೇ ಜೀವನ ಸಾಗಿಸುತ್ತಿದ್ದರು. ಅಲ್ಲದೆ  2015ರಲ್ಲಿ ಇಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೂ ನಿಂತು ಜಯಶಾಲಿಯಾಗಿದ್ದರು. ಆದರೆ ಈಗ ಮಹಿಳೆಯ ಅಸಲೀಯತ್ತು ಬಯಲಾಗಿತ್ತು, ಮಹಿಳೆ ವಿರುದ್ಧ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಎಫ್ ಐರ್ ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ 35 ವರ್ಷಗಳ ಹಿಂದೆ ಸಂಬಂಧಿಕರ ಮದುವೆಗೆಂದು ಪಾಕಿಸ್ತಾನದ ಕರಾಚಿಯಿಂದ ಉತ್ತರ ಪ್ರದೇಶದ ಇಟಾ ನಗರಕ್ಕೆ ಬಂದಿದ್ದ ಬಾನೋ ಬೇಗಂ ಮದುವೆ ಬಳಿಕೆ ಪಾಕಿಸ್ತಾನಕ್ಕೆ ವಾಪಸ್ ಆಗಿರಲಿಲ್ಲ. ಕೆಲ ದಿನಗಳ ಬಳಿಕ ಇಲ್ಲಿನ ಅಖ್ತರ್ ಅಲಿ ಎಂಬ ವ್ಯಕ್ತಿಯೊಬ್ಬರನ್ನು ಬಾನೋ ಮದುವೆಯಾಗಿದ್ದರು.  ಸ್ಥಳೀಯರನ್ನು ಮದುವೆಯಾದ ಕಾರಣ ಅವರ ವೀಸಾ ಅವಧಿಯನ್ನು ದೀರ್ಘಾವಧಿಗೆ ವಿಸ್ತರಣೆ ಮಾಡಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಬಾನೋ ಬೇಗಂ 2015ರಲ್ಲಿ ಗುಡಾವ್ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಂದು ಬಾನೋ ಯಾವ ಗುರುತಿನ ಪತ್ರ ಮತ್ತು ದಾಖಲಾತಿಗಳನ್ನು  ನೀಡಿದ್ದರೋ ತಿಳಿಯದು. ಆದರೆ ಇದೀಗ ಬಾನೋ ಬೇಗಂ ಅವರ ನಿಜವಾದ ಹಿನ್ನಲೆಯನ್ನು ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ (ಡಿಪಿಆರ್ಒ) ಅವರು ಪತ್ತೆ ಮಾಡಿದ್ದು, ಬಾನೋ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿದ್ದಾರೆ. 

ಇದೇ ವರ್ಷದ ಜನವರಿ 9 ರಂದು ಅಂದಿನ ಗ್ರಾಮ ಪಂಚಾಯಿತಿ ಮುಖ್ಯಸ್ಥೆಯಾಗಿದ್ದ ಶಹನಾಜ್ ಬೇಗಂ ಅವರ ನಿಧನದ ನಂತರ, ಗುಡೌ ಗ್ರಾಮ ಪಂಚಾಯಿತಿ ಸದಸ್ಯರು ಬಾನೊ ಬೇಗಂ ಅವರನ್ನು ಅಧಿಕೃತವಾಗಿ ಗ್ರಾಮ ಪಂಚಾಯಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಬಾನೋ ಬೇಗಂ ಅವರು  ಮುಖ್ಯಸ್ಥರಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೆಲ ಸದಸ್ಯರು ಅವರ ಪಾಕ್ ಹಿನ್ನಲೆ ಕುರಿತು ಮಾತನಾಡಿದ್ದರು. ಈ ವಿಚಾರ ಕಾಡ್ಗಿಚ್ಚಿನಂತೆ ಗ್ರಾಮದಲ್ಲಿ ಹರಿದಾಡಿತ್ತು. ಇದೇ ವಿಚಾರದಿಂದ ಬಾನೋ ಬೇಗಂ ಇದೇ ತಿಂಗಳ ಮೊದಲ ವಾರದಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸಿ ರಾಜಿನಾಮೆ ಸಲ್ಲಿಕೆ ಮಾಡಿದ್ದರು. 

ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಿಪಿಆರ್ ಒ ಅಲೋಕ್ ಪ್ರಿಯದರ್ಶಿ ಅವರು, ಬಾನೋ ಬೇಗಂ ಅವರ ಹಿನ್ನಲೆ ಪರಿಶೀಲಿಸಿದಾಗ ಅವರು ಭಾರತೀಯ ಪೌರತ್ವ ಪಡೆಯದೇ ಇರುವುದು ಸಾಬೀತಾಗಿತ್ತು. ಹೀಗಾಗಿ ಕೂಡಲೇ ಎಫ್ ಐಆರ್ ದಾಖಲಿಸುವಂತೆ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.  ಅಂತೆಯೇ ಪೊಲೀಸ್ ತನಿಖೆ ವೇಳೆ ಬಾನೋ ಬೇಗಂ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಹಣ ನೀಡಿ ಪಡೆದಿರುವುದು ಸಾಬೀತಾಗಿದೆ. ಈ ಕುರಿತಂತೆಯೂ ಬಾನೋ ಬೇಗಂ ವಿರುದ್ಧ ಪೊಲೀಸರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಧ್ಯಾನ್ ಸಿಂಗ್ ಅವರ ನಿರ್ದೇಶನದಂತ  ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇನ್ನು ಅಚ್ಚರಿ ಎಂದರೆ ಇದೀಗ ಬಾನೋ ಬೇಗಂ ವಿರುದ್ಧ ಎಫ್ ಐಆರ್ ದಾಖಲಿಸಲು ನಿರ್ದೇಶನ ನೀಡಿರುವ ಪಂಚಾಯತ್ ಕಾರ್ಯದರ್ಶಿ ಧ್ಯಾನ್ ಸಿಂಗ್ ಅವರೇ ಆಗಿನ ಗ್ರಾಮ ಪಂಚಾಯಿತಿ ಮುಖ್ಯಸ್ಥೆ ಶಹನಾಜ್ ಬೇಗಂ ಅವರ ನಿಧನದ ನಂತರ ಅವರ ಸ್ಥಾನಕ್ಕೆ ಬಾನೋ ಬೇಗಂರನ್ನು ಶಿಫಾರಸ್ಸು ಮಾಡಿದ್ದರು ಎಂಬ  ಮಾತು ಕೂಡ ಕೇಳಿಬರುತ್ತಿದೆ. ಇದೀಗ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಇತರ ದಾಖಲೆಗಳನ್ನು ಖರೀದಿಸಲು ಬಾನೊಗೆ ಸಹಾಯ ಮಾಡಿದ ಎಲ್ಲರ ವಿರುದ್ಧ ತನಿಖೆ ನಡೆಸಲಾಗುತ್ತಿದ್ದು, ವಂಚನೆಗೆ ಸಹಾಯ ಮಾಡುತ್ತಿರುವ ಎಲ್ಲರ ವಿರುದ್ಧ ಕ್ರಮವನ್ನು ತನಿಖಾ ವರದಿಯ ಆಧಾರದ ಮೇಲೆ  ತೆಗೆದುಕೊಳ್ಳಲಾಗುತ್ತದೆ ಎಂದು ಡಿಪಿಆರ್ ಒ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com