ನವದೆಹಲಿ: ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ತೆಗೆದುಕೊಂಡ ಮುಂಜಾಗೃತಾ ಮತ್ತು ಪೂರ್ವಭಾವಿ ಕ್ರಮಗಳಿಂದಾಗಿ ಕೊರೋನಾ ವೈರಸ್ ಸಾವಿನ ಪ್ರಮಾಣ ಶೇಕಡಾ 2.25ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ದೇಶದಲ್ಲಿ ಇಂದು ಒಂದೇ ದಿನ ದಾಖಲೆಯ 47,703 ಕೋವಿಡ್ 19 ಪ್ರಕರಣಗಳ ದಾಖಲಾಗಿವೆ. ಇದರೊಂದಿಗೆ ಸೋಂಕಿನ ಸಂಖ್ಯೆ 14,83,156ಕ್ಕೆಯಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 654 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 33,425ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೆಗೆದುಕೊಂಡ ಪರಿಣಾಮಕಾರಿ ಪತ್ತೆ ತಂತ್ರ, ಆಕ್ರಮಣಕಾರಿ ಪರೀಕ್ಷೆ ಮತ್ತು ಸಮಗ್ರ ಗುಣಮಟ್ಟದ ಆರೈಕೆ ವಿಧಾನದ ಆಧಾರದ ಮೇಲೆ ಪ್ರಮಾಣಿತ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ಗಳೊಂದಿಗೆ, ಸಾವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಕೊರೋನಾ ಸಾವಿನ ಪ್ರಮಾಣ ಜೂನ್ ಮಧ್ಯದಲ್ಲಿ ಶೇ. 3.33ರಷ್ಟು ಇತ್ತು. ಈಗ ಅದು ಶೇ.2.25ಕ್ಕೆ ಇಳಿದಿದೆ ಎಂದು ಸಚಿವಾಲಯ ತಿಳಿಸಿದೆ.
Advertisement