ಲಖನೌ: ಮಾರಕ ಕೊರೋನಾ ವೈರಸ್ ದಿನೇ ದಿನೇ ತನ್ನ ಆರ್ಭಟ ಹೆಚ್ಚಿಸುತ್ತಿದ್ದು, ಇದೀಗ ಉತ್ತರ ಪ್ರದೇಶ ಸಿಎಂ ಸಹಾಯವಾಣಿ ಕೇಂದ್ರದ 80 ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡು ಭೀತಿ ಸೃಷ್ಟಿಸಿದೆ.
ಹೌದು.. ಉತ್ತರ ಪ್ರದೇಶದ ಸಿಎಂ ಯೋದಿ ಆದಿತ್ಯಾನಾಥ್ ಅವರ ಕಚೇರಿಯ ಸಹಾಯವಾಣಿ ಕೇಂದ್ರ (1076) ಸುಮಾರು 80 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದು, ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿರುವುದು ದೇಶದಲ್ಲೇ ಮೊದಲ ಪ್ರಕರಣವಾಗಿದೆ.
ಮುಖ್ಯಮಂತ್ರಿಗಳ ಕಚೇರಿಯ ಸಹಾಯವಾಣಿ ಕೇಂದ್ರವನ್ನು ಯೋಗಿ ಸರ್ಕಾರ ಹೊರ ಗುತ್ತಿಗೆ ನೀಡಿದ್ದು, 4-5 ದಿನಗಳ ಹಿಂದೆ ಕಚೇರಿಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಬಳಿಕ ಈ ಸಂಖ್ಯೆ ಇದೀಗ 80ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು ಸಹಾಯವಾಣಿ ಕೇಂದ್ರಕ್ಕೆ ತಿಂಗಳ ಹಿಂದೆ ಭೇಟಿ ನೀಡಲಾಗಿತ್ತು. ಆಗ ಎಲ್ಲರಿಗೂ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿತ್ತು, ಮಾಸ್ಕ್, ಸ್ಯಾನಿಟೈಸರ್, ಕೈ ತೊಳೆಯುವಿಕೆ ಕಡ್ಡಾಯ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಇನ್ನು ಕೊರೋನಾ ಸೋಂಕಿತರು ಕಂಡು ಬಂದ ಹಿನ್ನಲೆಯಲ್ಲಿ ಗುತ್ತಿಗೆ ಸಂಸ್ಥೆ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಕಳೆದ ವರ್ಷವಷ್ಟೇ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ಸಿಎಂ ಕಚೇರಿಯ ಸಹಾಯವಾಣಿ ಸಂಖ್ಯೆ 1076 ಆರಂಭಿಸಿತ್ತು. ಇದು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದ್ದು, ರಾಜ್ಯದ ಯಾವುದೇ ನಾಗರಿಕ ಈ ಸಹಾಯವಾಣಿಗೆ ಕರೆ ಮಾಡಿ ದೂರು ಅಥವಾ ಮನವಿ ಸಲ್ಲಿಸಬಹುದಿತ್ತು. ಆ ಮೂಲಕ ಈ ಸಹಾಯವಾಣಿ ಜನರನ್ನು ನೇರವಾಗಿ ಸಿಎಂ ಅವರೊಂದಿಗೆ ಸಂಪರ್ಕಿಸುವ ಕಾರ್ಯ ಮಾಡುತ್ತಿದೆ.
Advertisement