ನವದೆಹಲಿ: ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೇ ತವರಿನತ್ತ ದೌಡಾಯಿಸುತ್ತಿರುವ ಕಾರ್ಮಿಕರ ತಡೆಯಲು ಕೇಂದ್ರ ಸರ್ಕಾರ ಹರ ಸಾಹಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಕಾರ್ಮಿಕರಿಂದ ಮನೆ ಮಾಲೀಕರು 1 ತಿಂಗಳು ಬಾಡಿಗೆ ಪಡೆಯುವಂತಿಲ್ಲ ಎಂದು ಹೇಳಿದೆ.
ಹೌದು,.. ಲಾಕ್ ಡೌನ್ ಹಿನ್ನಲೆಯಲ್ಲಿ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೇ, ಹಣ ಮತ್ತು ಆಹಾರ ವಿಲ್ಲದೇ ಏಕಾಏಕಿ ತಮ್ಮ ತಮ್ಮ ತವರಿನತ್ತ ದೌಡಾಯಿಸುತ್ತಿದ್ದಾರೆ. ಕಾರ್ಮಿಕರ ಈ ದಿಢೀರ್ ವಲಸೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಮುಂದಿನ 1 ತಿಂಗಳ ಕಾಲ ಕಾರ್ಮಿಕರು ತಂಗಿರುವ ಮನೆಗಳ ಮಾಲೀಕರು ಬಾಡಿಗೆ ಪಡೆಯುವಂತಿಲ್ಲ ಎಂದು ಹೇಳಿದೆ.
ಈ ಕುರಿತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರ, ಈಗಾಗಲೇ ತಮ್ಮ ಊರಿಗೆ ತೆರಳಿರುವ ಕಾರ್ಮಿಕರನ್ನು ಹತ್ತಿರದ ಆಶ್ರಯದಲ್ಲಿ ಎರಡು ವಾರಗಳವರೆಗೆ ಕ್ಯಾರೆಂಟೈನ್ನಲ್ಲಿ ಇಡಬೇಕು ಎಂದು ಹೇಳಿದೆ. ಅಂತೆಯೇ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಆದೇಶದಲ್ಲಿ, ಉದ್ಯೋಗದಾತರು ತಮ್ಮ ಕಾರ್ಮಿಕರ ವೇತನವನ್ನು ಯಾವುದೇ ಕಡಿತವಿಲ್ಲದೆ ನಿಗದಿತ ದಿನಾಂಕಗಳಲ್ಲಿ ಪಾವತಿಸಲಾಗುತ್ತದೆ.
ಅಂತೆಯೇ ಭೂಮಾಲೀಕರು ಬಡ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಂದ ಒಂದು ತಿಂಗಳ ಕಾಲ ಬಾಡಿಗೆಗೆ ಒತ್ತಾಯಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ, ಒಂದು ವೇಳೆ ತಮ್ಮ ಬಾಡಿಗೆದಾರರನ್ನು ಹೊರಹಾಕುವ ಮನೆ ಮಾಲೀಕರು ಸರ್ಕಾರದಿಂದ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
Advertisement