ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ವೈರಸ್‌ ಪತ್ತೆ: 300 ಮಂದಿ ವಿದೇಶಿಯರು ಬ್ಲಾಕ್'ಲಿಸ್ಟ್'ಗೆ

ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ - 19 ಸೋಂಕು ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಂಗಳವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ - 19 ಸೋಂಕು ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಂಗಳವಾರ ತಿಳಿಸಿದ್ದಾರೆ.

ಲಾಕ್‌ಡೌನ್‌ನ ಹೊರತಾಗಿಯೂ ಧಾರ್ಮಿಕ ಸಭೆ ನಡೆಸಿರುವುದು ಗಂಭೀರ ಅಪರಾಧ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮರ್ಕಝ್‌ ಕಟ್ಟಡದಲ್ಲಿ 1500ರಿಂದ 1700 ಮಂದಿ ಸೇರಿದ್ದರು. 1033 ಮಂದಿಯನ್ನು ಸ್ಥಳಾಂತರಿಸಿದ್ದು, ಅವರಲ್ಲಿ 334 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 700 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ಸಚಿವರು ತಿಳಿಸಿದರು.

ವೀಸಾ ಉಲ್ಲಂಘನೆ: ಬ್ಲಾಕ್ ಲಿಸ್ಟ್ ನಲ್ಲಿ 300 ಮಂದಿ ವಿದೇಶಿಯರು
ಈ ನಡುವೆ ಪ್ರವಾಸಿ ವೀಸಾ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 300 ಮಂದಿ ವಿದೇಶಿ ಪ್ರಜೆಗಳನ್ನು ಕಪ್ಪುಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಪ್ರವಾಸಿ ವೀಸಾ ಪಡೆದಿದ್ದ ವಿದೇಶಿ ಪ್ರಜೆಗಳು ದೆಹಲಿಯಲ್ಲಿ  ಮಾರ್ಚ್.1 ರಿಂದ ಮಾರ್ಚ್ 15ರವರೆಗೂ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೈರಸ್ ಹರಡಲು ಇದೇ ದೊಡ್ಡ ಕಾರಣವೆಂದು ಹೇಳಲಾಗುತ್ತಿದೆ.

ಥಯ್ಲ್ಯಾಂಡ್, ಮಲೇಶಿಯಾ ಸೇರಿದಂತೆ ಒಟ್ಟ 16 ದೇಶಗಳಿಂದ ಬಂದ 300 ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ 8,000 ಮಂದಿ ಪಾಲ್ಗೊಂಡಿದ್ದು, ಇದೀಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗಾಗಿ ತೀವ್ರ ಹುಡುಕಾಟಗಳು ಶುರುವಾಗಿದೆ. ಅಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿಯಲ್ಲಿ ವೈರಸ್ ಲಕ್ಷಣಗಳೂ ಕೂಡ ಕಾಣಿಸತೊಡಗಿವೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 30 ಮಂದಿಯಲ್ಲಿ ಇದೀಗ ವೈರಸ್ ಲಕ್ಷಣಗಳು ಕಾಣಿಸಿಕೊಂಡಿತ್ತು. ಇದೀಗ ಈ 30 ಮಂದಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪ್ರವಾಸಿ ವೀಸಾಗಳನ್ನು ಪಡೆದು ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದು ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದಂತಾಗಿದೆ. ಪ್ರವಾಸಿ ವೀಸಾ ಪಡೆದ ವಿದೇಶಿ ಪ್ರಜೆಗಳು ಆ ರಾಷ್ಟ್ರದ ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತಿಲ್ಲ. ಆದರೆ, 300 ಮಂದಿ ವಿದೇಶಿಯರು ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ವಿದೇಶಿ ಪ್ರಜೆಗಳನ್ನು ಬ್ಲಾಕ್'ಲಿಸ್ಟ್'ಗೆ ಸೇರ್ಪಡೆಗೊಳಿಸಲಾಗಿದೆ. ಬ್ಲಾಕ್ ಲಿಸ್ಟ್ ನಲ್ಲಿರುವ ವಿದೇಶಿ ಪ್ರಜೆಗಳು ಭವಿಷ್ಯದಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವಂತಿಲ್ಲವೆಂದು ತಿಳಿಸಿದೆ. 

ಕಾರ್ಯಕ್ರಮದಲ್ಲಿ ಭಾಗವಿಸಿದ್ದ 300 ಮಂದಿ ಪೈಕಿ ಈ ವರೆಗೂ ದೆಹಲಿ ಪೊಲೀಸರು 281 ಮಂದಿಯನ್ನು ಪತ್ತೆ ಹೆಚ್ಚಿದ್ದು, ಇದರಲ್ಲಿ 19 ಮಂದಿ ನೇಪಾಳ, 20 ಮಲೇಶಿಯಾ, ಓರ್ವ ಅಫ್ಘಾನಿಸ್ತಾನ, ಮ್ಯಾನ್ಮಾರ್ 33, ಅಲ್ಜೀರಿಯಾ 1, ಜಿಬೌಟಿ 1, ಕಿರ್ಗಿಸ್ತಾನ್ 28. ಇಂಡೋನೇಷಿಯಾ 72, ಥಯ್ ಲ್ಯಾಂಡ್ 7, ಶ್ರೀಲಂಕಾ 34, ಬಾಂಗ್ಲಾದೇಶ 19, ಇಂಗ್ಲೆಂಡ್ 3, ಸಿಂಗಾಪುರ 1, ಫಿಜಿ 4, ಫ್ರಾನ್ಸ್ 1, ಕುವೈತ್ 1 ಪ್ರಜೆಗಳು ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com