ಅಂಫಾನ್ ಚಂಡಮಾರುತಕ್ಕೆ 77 ಮಂದಿ ಸಾವು: ಪಶ್ಚಿಮ ಬಂಗಾಳಕ್ಕೆ 1000 ಕೋಟಿ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಕೊರೋನಾ ವೈರಸ್ ಬಳಿಕ ಅಂಫಾನ್ ಚಂಡಮಾರುತಕ್ಕೆ ನಲುಗಿ ಹೋಗಿರುವ ಪಶ್ಚಿಮ ಬಂಗಾಳ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ರೂ.1000 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ವೈರಸ್ ಬಳಿಕ ಅಂಫಾನ್ ಚಂಡಮಾರುತಕ್ಕೆ ನಲುಗಿ ಹೋಗಿರುವ ಪಶ್ಚಿಮ ಬಂಗಾಳ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ರೂ.1000 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. 

ಇಂದು ಬೆಳಿಗ್ಗೆ 11 ಗಂಟೆ ಪ್ರಧಾನಮಂತ್ರಿಗಳು ಪಶ್ಚಿಮ ಬಂಗಾಳ ತಲುಪಿದ್ದು, ಪ್ರಧಾನಿ ಮೋದಿಯನ್ನು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧಂಖರ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. 

ಬಳಿಕ ಮೋದಿಯವರು ಸಿಎಂ ಮಮತಾ ಹಾಗೂ ರಾಜ್ಯಪಾಲ ಜಗದೀಪ್ ಧಂಖರ್ ಜೊತೆಗೆ ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾಗಿರುವ ದಕ್ಷಿಣ ಬಂಗಾಳದಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ, ನಷ್ಟದ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. 

ಚಂಡಮಾರುತದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಈ ವರೆಗೂ 77 ಮಂದಿ ಸಾವನ್ನಪ್ಪಿದ್ದು, ಅನೇಕ ಪ್ರದೇಶಗಳಿಗೆ ತೆರಳು ಸಾಧ್ಯವಾಗುತ್ತಿಲ್ಲವಾದ್ದರಿಂದ ಅಲ್ಲಿನ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.     

ಅಧಿಕಾರಿಗಳೊಂದಿಗೆ ಸಭೆ ಬಳಿ ಮಾತನಾಡಿರುವ ಪ್ರಧಾನಿ ಮೋದಿಯವರು, ಪಶ್ಚಿಮ ಬಂಗಾಳಕ್ಕೆ ರೂ.1000 ಗಳ ಭರವಸೆಯನ್ನು ನೀಡುತ್ತಿದ್ದೇವೆ. ಘಟನೆಯಲ್ಲಿ ಸಾವನ್ನಪ್ಪಿರುವವರ ಕುಟುಂಬಕ್ಕೆ ರೂ.2 ಲಕ್ಷ ಹಾಗೂ ಗಾಯಾಳುಗಲಿಗೆ ರೂ.50,000 ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಪರಿಹಾರ ಕಾರ್ಯ ಹಾಗೂ ಮರು ನಿರ್ಮಾಣ ಕಾರ್ಯಗಳಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಸದಾಕಾಲ ಪಶ್ಚಿಮಬಂಗಾಳದ ಜೊತೆಗೆ ನಿಲ್ಲಲಿದೆ. ಪಶ್ಚಿಮ ಬಂಗಾಳ ಮುನ್ನಡೆಯುವದಷ್ಟೇ ನಮಗೆ ಬೇಕು. ಮತ್ತಷ್ಟು ವೈಮಾನಿಕ ಸಮೀಕ್ಷೆಗಾಗಿ ಕೇಂದ್ರ ಶೀಘ್ರದಲ್ಲಿಯೇ ತಂಡವೊಂದನ್ನು ರವಾನಿಸಲಿದ್ದು, ಈ ತಂಡವು ನಷ್ಟವನ್ನು ಲೆಕ್ಕಹಾಕಲಿದೆ ಎಂದಿದ್ದಾರೆ.

ಕೊರೋನಾ ಹಾವಳಿ ಒಂದೆಡೆಯಾದರೆ, ಮತ್ತೊಂದೆಡೆ ಕೆಲ ರಾಜ್ಯಗಳಲ್ಲಿ ಚಂಡಮಾರುತಗಳು ಎದುರಾಗಿವೆ. "ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಮಾಜಿಕ ದೂರ ಅಗತ್ಯವಿದೆ, ಆದರೆ ಚಂಡಮಾರುತದ ವಿರುದ್ಧ ಹೋರಾಡಲು ಜನರು ಸುರಕ್ಷಿತ ಪ್ರದೇಶಗಳಿಗೆ ಹೋಗಬೇಕಾಗಿದೆ. ಈ ಎಲ್ಲಾ ಸಂಕಷ್ಟಗಳ ನಡುವಲ್ಲೂ ಪಶ್ಚಿಮ ಬಂಗಾಳ ಉತ್ತಮವಾಗಿ ಹೋರಾಟ ನಡೆಸುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ನಾವೆಲ್ಲರೂ ಪಶ್ಚಿಮ ಬಂಗಾಳ ಜನತೆಯೊಂದಿಗೆ ಬೆಂಬಲಕ್ಕೆ ನಿಲ್ಲುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com