ಪಾಟ್ನಾ: ನನ್ನ ಹೋರಾಟ ಏನಿದ್ದರೂ ನಿತೀಶ್ ಕುಮಾರ್ ವಿರುದ್ಧ ಮಾತ್ರ, ಆದರೆ ನನ್ನ ಕೊನೆಯ ಉಸಿರಿರುವವರೆಗೂ ಪ್ರಧಾನಿ ಮೋದಿ ಜೊತೆಗಿರುತ್ತೇನೆ ಎಂದು ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎನ್ಡಿಎ ಪರ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಇತ್ತಿಚಿಗೆ ನಿಧನರಾದ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಸ್ಮರಿಸಿದರು. ರಾಮ್ ವಿಲಾಸ್ ಪಾಸ್ವಾನ್ ತಮ್ಮ ಜೀವನದ ಕೊನೆಯ ಉಸಿರಿರುವವರೆಗೂ ನನ್ನ ಜೊತೆ ಇದ್ದರು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಇದೇ ವಿಚಾರಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿರುವ ಚಿರಾಗ್, 'ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ತಮ್ಮ ತಂದೆಯನ್ನು ಸ್ಮರಿಸಿರುವುದಕ್ಕೆ ಧನ್ಯವಾದ ಅರ್ಪಿಸಿರುವ ಪುತ್ರ ಚಿರಾಗ್ ಪಾಸ್ವಾನ್, ನಾನೂ ಕೂಡ ಪ್ರಧಾನಿ ಅವರೊಂದಿಗೆ ನನ್ನ ಜೀವನದ ಕೊನೆಯ ಕ್ಷಣದವರೆಗೂ ಇರುತ್ತೇನೆ ಎಂದು ಭರವಸೆ ನೀಡಿದರು.
ಪ್ರಧಾನಿ ನಮ್ಮ ತಂದೆಯನ್ನು ನೆನೆದಿರುವುದು ನನಗೆ ಗೌರವದ ವಿಷಯ. ನಾನು ತುಂಬ ಭಾವುಕನಾಗಿದ್ದೇನೆ. ಅಲ್ಲದೇ ಮೋದಿ ಅವರೊಂದಿಗೆ ಗಟ್ಟಿಯಾಗಿ ನಿಲ್ಲುವ ಭರವಸೆಯನ್ನೂ ನೀಡುತ್ತೇನೆ. ನನ್ನ ಹೋರಾಟ ಏನಿದ್ದರೂ ನಿತೀಶ್ ಕುಮಾರ್ ವಿರುದ್ಧವೇ ಹೊರತು ಬಿಜೆಪಿ ವಿರುದ್ಧವಲ್ಲ. ಆದರೆ ಜೆಡಿಯು ಮಿತ್ರ ಪಕ್ಷವಾಗಿರುವುದರಿಂದ ನನ್ನ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಆದರೆ ನಾನು ಮಾತ್ರ ಬಿಜೆಪಿ ವಿರುದ್ಧ ಮಾತನಾಡುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಸ್ಪಷ್ಟಪಡಿಸಿದರು.
ಅಂತೆಯೇ, ನಾನು ಸಿಎಂ ಆದರೆ ನಿತೀಶ್ ಕುಮಾರ್ ರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ನಾನು ಅಧಿಕಾರಕ್ಕೆ ಬಂದರೆ ಸಾತ್ ನಿಶ್ಚೇ (ಏಳು ಪರಿಹಾರಗಳು) ಯೋಜನೆಯಲ್ಲಿ ನಾನು ಹಗರಣಗಳನ್ನು ತನಿಖೆ ಮಾಡುತ್ತೇನೆ ಮತ್ತು ತಪ್ಪಿತಸ್ಥರೆಲ್ಲರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಆ ಪಟ್ಟಿಯಲ್ಲಿ ನಿತೀಶ್ ಕುಮಾರ್ ಇದ್ದರೆ ಅವರನ್ನೂ ಸಹ ಎಂದು ಚಿರಾಗ್ ಹೇಳಿದ್ದಾರೆ.
Advertisement