ಸದ್ಯ ಎನ್ಕೌಂಟರ್ ಮಾಡಿಲ್ಲ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಫೀಲ್ ಖಾನ್ ಕಿಡಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಸತತ 8 ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಿವಾದಿತ ವೈದ್ಯ ಕಫೀಲ್ ಖಾನ್ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಿಡುಗಡೆಯಾದ ವೈದ್ಯ ಕಫೀಲ್ ಖಾನ್
ಬಿಡುಗಡೆಯಾದ ವೈದ್ಯ ಕಫೀಲ್ ಖಾನ್

ಲಖನೌ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಸತತ 8 ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಿವಾದಿತ ವೈದ್ಯ ಕಫೀಲ್ ಖಾನ್ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಜೈಲಿನಿಂದ ಹೊರ ಬರುತ್ತಲೇ ಅವರಿಗಾಗಿ ಕಾಯುತ್ತಿದ್ದ ಮಾಧ್ಯಮಗಳ ಮುಂದೆ ಕಫೀಲ್ ಖಾನ್ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ತಮ್ಮ ಬಂಧನವನ್ನು ಕಾನೂನು ಮತ್ತು ಸಂವಿಧಾನ ವಿರೋಧಿ ಕೃತ್ಯ ಎಂದು ಹೇಳಿದ ಕಫೀಲ್ ಖಾನ್, ಸದ್ಯ ನನ್ನನ್ನು ಎನ್ಕೌಂಟರ್ ಮಾಡಿಲ್ಲ  ಎಂದೂ ಅಸಮಾಧಾನ ವ್ಯಕ್ತಪಡಿಸಿದರು. 

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಘನತೆವೆತ್ತ ನ್ಯಾಯಾಲಯವು ಅತ್ಯುತ್ತಮ ಆದೇಶ ನೀಡಿದೆ. ಆ ಮೂಲಕ ದೇಶದ ಜನತೆಗೆ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ ಇನ್ನೂ ಗಟ್ಟಿಯಾಗಿದೆ. ನ್ಯಾಯಾಲಯದ ಆದೇಶದ ಮೂಲಕ ನನ್ನ ಭಾಷಣ  ಪ್ರಚೋದನಕಾರಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಅಂತೆಯೇ ಮುಂಬೈನಿಂದ ಮಥುರಾಗೆ ನನ್ನನ್ನು ಎನ್ಕೌಂಟರ್ ಮಾಡದೇ ಕರೆತಂದ ಎಸ್ ಟಿಎಫ್ ಅಧಿಕಾರಿಗಳಿಗೂ ನಾನು ಅಭಾರಿಯಾಗಿದ್ದೇನೆ ಎಂದು ಕಫೀಲ್ ಖಾನ್ ಹೇಳಿದ್ದಾರೆ.

ಇದೇ ವೇಳೆ ರಾಮಾಯಣದ ಉಲ್ಲೇಖ ಮಾಡಿದ ಕಫೀಲ್ ಖಾನ್, ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿ ರಾಜ ತನ್ನ ಪ್ರಜೆಗಳ ಕುರಿತಂತೆ ರಾಜಧರ್ಮ ಪಾಲನೆ ಮಾಡಬೇಕು. ಅಂದರೆ ತನ್ನ ಪ್ರಜೆಗಳ ಕುರಿತಂತೆ ಯಾವುದೇ ರೀತಿಯ ಪಕ್ಷಪಾತ, ವರ್ಣಬೇದ, ಜಾತಿ ಕೋಮು ಬೇಧ ಮಾಡಬಾರದು. ಆದರೆ ಉತ್ತರ  ಪ್ರದೇಶದ ರಾಜ ಹಠಮಾರಿ ಮಗುವಿನಂತೆ ವರ್ತಿಸುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ಧ ಕಿಡಿಕಾರಿದರು.
 
ಈ ಹಿಂದೆ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಬಳಿ ನಡೆದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ವಿರುದ್ಧದ ಪ್ರತಿಭಟನೆ ವೇಳೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ಡಾ.ಕಫೀಲ್ ಖಾನ್ ಗೆ ಅಲಹಾಬಾದ್ ಹೈಕೋರ್ಟ್ ಷರತ್ತು ಬದ್ಧ  ಜಾಮೀನು ನೀಡಿತ್ತು. ಡಾ. ಕಫೀಲ್ ಖಾನ್ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯನ್ನು 15 ದಿನಗಳೊಳಗೆ ಇತ್ಯರ್ಥಪಡಿಸಬೇಕೆಂದು ಹೈಕೋರ್ಟ್ ಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಮಂಗಳವಾರ ಜಾಮೀನು ಮಂಜೂರು ಮಾಡಲಾಗಿದೆ. ಕಳೆದ ವರ್ಷ ಡಿಸೆಂಬರ್ 12 ರಂದು ಆಲಿಘರ್  ವಿಶ್ವವಿದ್ಯಾನಿಲಯದ ಬಳಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆ ವೇಳೆಯಲ್ಲಿ ಪ್ರಚೋದನಾಕಾರಿ ಆರೋಪದ ಮೇರೆಗೆ ಜನವರಿಯಲ್ಲಿ ಮುಂಬೈಯಲ್ಲಿ ಉತ್ತರ ಪ್ರದೇಶ ಟಾಸ್ಕ್ ಫೋರ್ಸ್ ನಿಂದ ಡಾ. ಕಫೀಲ್ ಖಾನ್ ಅವರನ್ನು ಬಂಧಿಸಲಾಗಿತ್ತು. ನಂತರ ಫೆಬ್ರವರಿ 14ರಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ  ಪ್ರಕರಣ ದಾಖಲಿಸಲಾಗಿತ್ತು.

ಈಗ ಬರೋಬ್ಬರಿ 8 ತಿಂಗಳ ನಂತರ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ. 2017ರಲ್ಲಿ ಗೋರಖ್‌ಪುರ ಆಸ್ಪತ್ರೆಯಲ್ಲಿ 60 ಮಕ್ಕಳು ಸಾವಿಗೀಡಾದ ಬಳಿಕ ಕಫೀಲ್‌ ಖಾನ್‌ರನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಕ್ಲೀನ್‌ ಚಿಟ್‌ ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com