ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷ ಬಾಕಿಯಿದೆ. ಆಗಲೇ ಸಿದ್ದತೆ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದು ಅದರ ನೇತೃತ್ವವನ್ನು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ವಹಿಸಿಕೊಳ್ಳಲಿದ್ದಾರೆ.
ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ತಂಡ ರಚನೆಯನ್ನು ಆರಂಭಿಸಿದ್ದಾರೆ, ಇದರಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಹೈಕಮಾಂಡ್ ಗೆ ಪತ್ರ ಬರೆದು ಸುದ್ದಿಯಾಗಿದ್ದ ಹಿರಿಯ ನಾಯಕರು ಇರುವುದಿಲ್ಲ ಎಂದು ತಿಳಿದುಬಂದಿದೆ.
ಜಿತಿನ್ ಪ್ರಸಾದ್ ಮತ್ತು ರಾಜ್ ಬಬ್ಬರ್ ಅವರು ಈ ಹಿಂದೆ ಬರೆದ ಪತ್ರಕ್ಕೆ ಸಹಿ ಹಾಕಿದ್ದರು. ಅವರು ಈ ಹೊಸ ತಂಡದಲ್ಲಿ ಇರುವುದಿಲ್ಲ. ಪತ್ರ ಬರೆದವರನ್ನು ವಿರೋಧಿಸಿದವರಾದ ನಿರ್ಮಲ್ ಖತ್ರಿ, ನಸೀಬ್ ಪಠಾಣ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ.
ಕಳೆದ ವರ್ಷ 2019ರ ಲೋಕಸಭೆ ಚುನಾವಣೆಗೆ ಮುನ್ನ, ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯನ್ನು ಪ್ರಿಯಾಂಕಾ ಗಾಂಧಿ ಹೆಗಲಿಗೆ ವಹಿಸಲಾಗಿತ್ತು. ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿಯನ್ನು ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಹಿಸಿದ್ದರು. ನಂತರ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದರು.
ಇದೀಗ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯನ್ನು ಮುಂದಿನ ವಿಧಾನಸಭೆ ಚುನಾವಣೆಗೆ ಸಲ್ಮಾನ್ ಖುರ್ಷಿದ್ ಅವರ ಹೆಗಲಿಗೆ ಹಾಕಲಾಗಿದ್ದು ಅವರು ಯಾವ ಮಟ್ಟದಲ್ಲಿ ಜನರ ಮತಗಳನ್ನು ಸೆಳೆಯುವಲ್ಲಿ ಸಫಲರಾಗುತ್ತಾರೆ ಎಂದು ನೋಡಬೇಕಿದೆ. ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಆಲಿಘರ್ ನವರಾಗಿದ್ದು ಮಧ್ಯ ಉತ್ತರ ಪ್ರದೇಶದ ಫರ್ರುಖಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.ಗಾಂಧಿ ಕುಟುಂಬಕ್ಕೆ ನಿಷ್ಠಾವಂತರು.
Advertisement