ಎಟಿಎಂ ಯಂತ್ರಕ್ಕೆ ಹಣ ತುಂಬುತ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, 5 ಲಕ್ಷ ರೂ. ಹಣ ದೋಚಿ ದರೋಡೆಕೋರರು ಪರಾರಿ!
ಹೈದ್ರಾಬಾದ್: ಬ್ಯಾಂಕ್ ವೊಂದರ ಎಟಿಎಂ ಯಂತ್ರಕ್ಕೆ ಹಣ ತುಂಬುತ್ತಿದ್ದ ಏಜೆನ್ಸಿಯೊಂದರ ಸಿಬ್ಬಂದಿ ಮೇಲೆ ಅಪರಿಚಿತ ಶಂಕಿತರು ಹಾಡಹಗಲೇ ಗುಂಡು ಹಾರಿಸಿ, 5 ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ಪಟೇಲ್ ಕುಂಟದಲ್ಲಿ ನಡೆದಿದೆ.
ಘಟನೆಯಲ್ಲಿ ಭದ್ರತಾ ಮೇಲ್ವಿಚಾರಕ ಆಲಿ ಬಾಗ್ ಸಾವನ್ನಪ್ಪಿದ್ದು, ಶ್ರೀನಿವಾಸ್ ಎಂಬವರು ಗಾಯಗೊಂಡಿದ್ದಾರೆ. ಸೈಬರಾಬಾದ್ ಕಮಿಷನರ್ ವಿ ಸಿ ಸಜ್ಜಾನರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂತರ್ ರಾಜ್ಯದ ಗ್ಯಾಂಗ್ ಈ ಅಪರಾಧ ನಡೆಸಿರುವ
ಸಾಧ್ಯತೆಯಿರುವುದಾಗಿ ಹೇಳಿದ್ದಾರೆ.
ಅಪರಾಧ ನಡೆದ ಸ್ಥಳದಲ್ಲಿ ಬುಲೆಟ್ ಮ್ಯಾಗಜಿನ್ ಹಾಗೂ ಹೆಲ್ಮೆಟ್ ವೊಂದು ಪೊಲೀಸರಿಗೆ ಸಿಕ್ಕಿದೆ. ಬ್ಲಾಕ್ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಈ ಅಪರಾಧ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿದ್ದ ಅಂಗಡಿ ಮಾಲೀಕರು, ಏಜೆನ್ಸಿ ಸಿಬ್ಬಂದಿಯನ್ನು ರಕ್ಷಿಸಲು ಬಂದಿದ್ದಾರೆ. ಆದರೆ, ಶಂಕಿತರು ಮಾರಕಾಸ್ತ್ರಗಳಿಂದ ಬೆದರಿಸಿ, ಅವರತ್ತ ಕಲ್ಲು ತೂರಾಟ ನಡೆಸಿ, ಅಲ್ಲಿಂದ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ