ಹೆಣ್ಣುಮಕ್ಕಳಿಗೆ ಬೆಳವಣಿಗೆಯ ಮಾರ್ಗಗಳನ್ನು ಅನ್ವೇಷಿಸಲು ಅವಕಾಶಗಳನ್ನು ಒದಗಿಸಿ: ಪೋಷಕರಿಗೆ ರಾಷ್ಟ್ರಪತಿ ಕೋವಿಂದ್ ಕರೆ

ಹೆಣ್ಣುಮಕ್ಕಳಿಗೂ ಬೆಳವಣಿಗೆಯ ಮಾರ್ಗಗಳನ್ನು ಅನ್ವೇಷಿಸಲು ಅವಕಾಶಗಳನ್ನು ಒದಗಿಸಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್

ನವದೆಹಲಿ: ಹೆಣ್ಣುಮಕ್ಕಳಿಗೂ ಬೆಳವಣಿಗೆಯ ಮಾರ್ಗಗಳನ್ನು ಅನ್ವೇಷಿಸಲು ಅವಕಾಶಗಳನ್ನು ಒದಗಿಸಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಶಿಷ್ಟಾಚಾರದಂತೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಆಗಿರುವುದರಿಂದ ತನ್ನದೇ ಆದ ಮಹತ್ವ ಪಡೆದಿದೆ ಎಂದು ಹೇಳಿದ ರಾಷ್ಟ್ರಪತಿ ಕೋವಿಂದ್, ಮಹಾತ್ಮ ಗಾಂಧಿ  ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು.

ನಾವು ಸ್ವಾತಂತ್ರ್ಯ ಸಿಕ್ಕ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಈ ದಿನದ ಹಿಂದೆ ಹಲವರ ತ್ಯಾಗ ಬಲಿದಾನಗಳಿವೆ. ದೇಶ ಕಾಣದ ಹಲವರ ಹೋರಾಟ, ತಿಳಿಯದೇ, ಅರಿಯದೇ ಹೋದ ಹಲವರ ಬಲಿದಾನಗಳಿವೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ, ಹೋರಾಟ ಮಾಡಿದ ಸ್ವಾತಂತ್ರ್ಯ ವೀರರಿಗೆ ನನ್ನ  ನಮನಗಳು. ಈ ಸಂದರ್ಭದಲ್ಲಿ ನಿಂತು ಹಿಂದಿನ 75 ವರ್ಷಗಳನ್ನು ಮೆಲುಕು ಹಾಕಿದರೆ ನಾವೆಷ್ಟು ದೂರ ಸಾಗಿದ್ದೇವೆ ಅನ್ನೋದು ಅರಿವಾಗುತ್ತದೆ. ಹಲವು ಅಡೆ ತಡೆಗಳನ್ನು ಮೆಟ್ಟಿ ನಿಂತು ಒಗ್ಗಟ್ಟಾಗಿ ಹೋರಾಡಿದ್ದೇವೆ. ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸಿದ್ದೇವೆ. ನೋವು ನಲಿವುಗಳನ್ನು ಸಮನಾಗಿ ಹಂಚಿದ್ದೇವೆ  ಎಂದರು.

ಅಮೃತ ಮಹೋತ್ಸವದಲ್ಲಿರುವ ನಮಗೆ ಸಂಭ್ರಮ ಹೆಚ್ಚಿದೆ. ಆದರೆ ದೇಶದಲ್ಲಿ ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಎಚ್ಚರ ಮರೆಯಬಾರದು. ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಕೊರೋನಾ ಮಾರ್ಗಸೂಚಿ ಪಾಲಿಸಬೇಕು ಎಂದು ಕೋವಿಂದ್ ಎಚ್ಚರಿಕೆ ನೀಡಿದರು. ಪ್ರತಿಯೊಬ್ಬರು  ಕೊರೋನಾ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ನಾವು ಒಳಿತಿನ ಹಾದಿಯಲ್ಲಿ ಹೇಗೆ ಮುನ್ನಡೆಯಬೇಕು ಎನ್ನುವುದನ್ನು ಮಹಾತ್ಮ ಗಾಂಧಿ ತೋರಿಸಿಕೊಟ್ಟರು. ತಪ್ಪು ಹಾದಿಯಲ್ಲಿ ವೇಗವಾಗಿ ಓಡುವುದಕ್ಕಿಂತಲ್ಲೂ ಸರಿಯಾದ ದಾರಿಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುವುದು ಒಳ್ಳೆಯದು ಎಂದು  ಅಭಿಪ್ರಾಯಪಟ್ಟರು.

ಒಲಿಂಪಿಕ್ ಪಂದ್ಯಾವಳಿಯಲ್ಲಿ ಭಾರತದ ಅಭೂತಪೂರ್ವ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಎಲ್ಲ ಪೋಷಕರೂ ತಮ್ಮ ಮಕ್ಕಳನ್ನು, ಮುಖ್ಯವಾಗಿ ಹೆಣ್ಣುಮಕ್ಕಳನ್ನು ಹೀಗೆ ಬೆಳೆಸಬೇಕೆಂದು ಕೋರುತ್ತೇನೆ. ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯರ ಯಶಸ್ಸಿನೊಂದಿಗೆ ಯುಗ-ಬದಲಾವಣೆಗಳು  ನಡೆಯುತ್ತಿವೆ. ಪ್ರತಿ ಪೋಷಕರೂ ತಮ್ಮ ಹೆಣ್ಣುಮಕ್ಕಳಿಗೆ ಬೆಳವಣಿಗೆಯ ಮಾರ್ಗಗಳನ್ನು ಅನ್ವೇಷಿಸಲು ಅವಕಾಶಗಳನ್ನು ಒದಗಿಸಬೇಕು. ಉನ್ನತ ಶಿಕ್ಷಣದಿಂದ ಸಶಸ್ತ್ರ ಪಡೆಗಳವರೆಗೆ, ಪ್ರಯೋಗಾಲಯಗಳಿಂದ ಆಟದ ಮೈದಾನಗಳವರೆಗೆ, ಹೆಣ್ಣು ಮಕ್ಕಳು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ಹೇಳಿದರು. 

ಇದೇ ವೇಳೆ ಭಾರತವು ಇನ್ನೂ ಕೊರೊನಾ ಪಿಡುಗಿನ ವಿರುದ್ಧ ಹೋರಾಡುತ್ತಲೇ ಇದೆ. ಕೊರೊನಾ 2ನೇ ಅಲೆಯಲ್ಲಿ ಸಾಕಷ್ಟು ಜನರು ಜೀವ ಕಳೆದುಕೊಂಡರು ಎಂಬ ಬಗ್ಗೆ ನನವೆ ವಿಷಾದವಿದೆ. ಆದರೆ ನಾವು ಹೆಚ್ಚು ಜನರನ್ನು ಉಳಿಸಿಕೊಂಡೆವು ಎಂದು ಅವರು ನುಡಿದರು. ಕೊರೊನಾ ಪಿಡುಗಿನ ವಿರುದ್ಧದ  ಹೋರಾಟದಲ್ಲಿ ದುಡಿದ ಆರೋಗ್ಯ ಇಲಾಖೆ ಸಿಬ್ಬಂದಿ, ಲಸಿಕೆ ವಿಜ್ಞಾನಿಗಳ ಕೊಡುಗೆಯನ್ನು ಸ್ಮರಿಸುತ್ತೇನೆ. ದೇಶದ ಎಲ್ಲ ಜನರೂ ಲಸಿಕೆ ತೆಗೆದುಕೊಳ್ಳುವ ಮೂಲಕ ಪಿಡುಗಿನಿಂದ ರಕ್ಷಣೆ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುವಾಗಲೂ ಕೊರೊನಾ  ನಿಯಮಗಳನ್ನು ಪಾಲಿಸಬೇಕು. ಕೊರೊನಾ ವಿರುದ್ಧ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಕೊರೊನಾ 2ನೇ ಅಲೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ಆ ನೋವನ್ನು ಮರೆಯಲು ಆಗುವುದಿಲ್ಲ. ಕೊವಿಡ್ ನಿರ್ವಹಣೆಗೆ ರೂಪಿಸಿದ ಯೋಜಿತ ಕಾರ್ಯತಂತ್ರವು ಹಲವರ ಜೀವ ಉಳಿಸಿತು. ಕೊರೊನಾದಿಂದ  ತಾತ್ಕಾಲಿಕವಾಗಿ ಆರ್ಥಿಕತೆಗೆ ಹಿನ್ನಡೆಯಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಭಾರತವು ಹಲವು ದೇಶಗಳಿಗೆ ನೆರವು ನೀಡಿದೆ ಎಂದು ರಾಷ್ಟ್ರಪತಿ ನೆನಪಿಸಿಕೊಂಡರು.

ಸೆಂಟ್ರಲ್ ವಿಸ್ತಾ ಯೋಜನೆಯನ್ನು ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ಬಣ್ಣಿಸಿದ ಅವರು, ಕೊರೊನಾದಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ. ದೇಶದಲ್ಲಿ ವ್ಯಾಪಾರಕ್ಕೆ ಉತ್ತಮ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನ ಕಂಡು ದೇಶವೇ ಹೆಮ್ಮೆ ಪಡುತ್ತಿದೆ. ಹಾಗಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತಷ್ಟು ವಿಶೇಷವಾಗಿದೆ. 121 ವರ್ಷಗಳ ಬಳಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ನಮ್ಮ ದೇಶದಿಂದ ಅತೀ ಹೆಚ್ಚು ಕ್ರೀಡಾಪಟುಗಳನ್ನು ಕಳುಹಿಸಿದ್ದೇವೆ ಅವರು ಉತ್ತಮ  ಸಾಧನೆ ತೋರಿ ಪದಕ ಬೇಟೆಯಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com