ಬದುಕುವ ಹಕ್ಕು ಪರಮೋಚ್ಚ; ಕನ್ವರ್ ಯಾತ್ರೆ ಕುರಿತ ನಿಲುವು ಮರುಪರಿಶೀಲಿಸಿ: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ಸೂಚನೆ

ಬದುಕುವ ಹಕ್ಕು ಪರಮೋಚ್ಚವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 
ಕಳೆದ ವರ್ಷ ಉತ್ತರಪ್ರದೇಶ ರಾಜ್ಯದಲ್ಲಿ ನಡೆಸಲಾದ ಕನ್ವರ್ ಯಾತ್ರೆ (ಸಂಗ್ರಹ ಚಿತ್ರ)
ಕಳೆದ ವರ್ಷ ಉತ್ತರಪ್ರದೇಶ ರಾಜ್ಯದಲ್ಲಿ ನಡೆಸಲಾದ ಕನ್ವರ್ ಯಾತ್ರೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಬದುಕುವ ಹಕ್ಕು ಪರಮೋಚ್ಚವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 

ಕನ್ವರ್ ಯಾತ್ರೆಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. 

ಶಿವನ ಭಕ್ತರು ಗಂಗಾ ನದಿಯ ವಿವಿಧ ಸ್ನಾನಘಟ್ಟಗಳಲ್ಲಿ ಇದೇ 25ರಿಂದ ಆಗಸ್ಟ್‌ 6ರವರೆಗೆ ಪವಿತ್ರ ಸ್ನಾನ ಮಾಡಲಿದ್ದಾರೆ. ಕೋವಿಡ್‌ ಸಾಂಕ್ರಾ ಮಿಕದ ಮಧ್ಯೆಯೇ ಕನ್ವರ್ ಯಾತ್ರೆ ನಡೆಸಲು ಈಗಾಗಲೇ ಹಲವು ಭಕ್ತರ ಅಖಾಡಗಳು ಸಿದ್ಧತೆ ನಡೆಸಿವೆ. ಹೀಗಾಗಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ.

ಇದರಂತೆ ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರೀಮನ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠವು ವಿಚಾರಣೆ ನಡೆಸಿ, ಬದುಕುವ ಹಕ್ಕು ಪರಮೋಚ್ಚವಾಗಿದ್ದು, ಸಾಂಕೇತಿಕ ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಹಾಗೂ ಈ ಕುರಿತು ಜು.19ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ. 

ಕನ್ವರ್ ಯಾತ್ರೆಯನ್ನು ನಡೆಸಬೇಕು ಎಂಬ ನಿರ್ಧಾರವನ್ನು ಮರುಪರಿಶೀಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ನಾವು ಇನ್ನೊಂದು ಅವಕಾಶ ನೀಡುತ್ತೇವೆ. ತಿದ್ದಿಕೊಳ್ಳದಿದ್ದರೆ ನಾವೇ ಆದೇಶ ರವಾನಿಸುತ್ತೇವೆ. ನಾವೆಲ್ಲರೂ ಭಾರತೀಯರು ಮತ್ತು 21ನೇ ಕಾಯ್ದೆಯು ನಮ್ಮೆಲ್ಲರಿಗೂ ಅನ್ವಯವಾಗುತ್ತದೆ. ನೀವೇ ಮರುಪರಿಶೀಲಿಸಿ ಇಲ್ಲವೇ ನಾವೇ ಆದೇಶ ಹೊರಡಿಸುತ್ತೇವೆಂದು ತಿಳಿಸಿದೆ.

ಧಾರ್ಮಿಕ ಹಾಗೂ ಎಲ್ಲ ಇತರೆ ಭಾವನೆಗಳಿಗಿಂತ ಜನರ ಮೂಲಭೂತ ಹಕ್ಕುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಇದು ನಮ್ಮೆಲ್ಲರಿಗೂ ಸಂಬಂಧಿಸಿರುವ ಬದುಕುವ ಮೂಲಭೂತ ಹಕ್ಕಿನ ಜೀವಾಳ(ಹೃದಯಭಾಗ) ಎಂಬ ಅಭಿಪ್ರಾಯವನ್ನು ಹೊಂದಿದ್ದೇವೆ. ಭಾರತೀಯ ಪ್ರಜೆಗಳ ಆರೋಗ್ಯ ಮತ್ತು ಜೀವಿಸುವ ಹಕ್ಕು ಎನ್ನುವುದು ಎಲ್ಲ ಧಾರ್ಮಿಕ ಹಾಗೂ ಇತರೆ ಮೂಲಭೂತ ಹಕ್ಕುಗಳಿಗಿಂತ ಅತ್ಯುನ್ನತವಾಗಿರುತ್ತದೆ ಎಂದು ಹೇಳಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿದೆ.

ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ನಡೆಸಲು ಭಾರೀ ಸಿದ್ಧತೆ ನಡೆದಿದೆ. ರಾಜ್ಯದಲ್ಲಿರುವ ಗಂಗಾ ಸ್ನಾನಘಟ್ಟಗಳಲ್ಲಿ ಪವಿತ್ರ ಸ್ನಾನ ನಡೆಸಲು ಮತ್ತು ಗಂಗಾ ಜಲ ಕೊಂಡೊಯ್ಯಲು ಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

2021ರ ಮಾರ್ಚ್‌ನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದರು. ಕೋವಿಡ್‌ ಮಾರ್ಗಸೂಚಿಯನ್ನು ಕಡೆಗಣಿಸಿದ್ದರು. ಮೇಳದಲ್ಲಿ ಭಾಗವಹಿಸಿದ್ದವರಲ್ಲಿ ಹಲವರಿಗೆ ಕೋವಿಡ್‌ ತಗುಲಿತ್ತು. ಮೇಳ ನಡೆಸಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಕನ್ವರ್ ಯಾತ್ರೆಗೆ ಉತ್ತರಪ್ರದೇಶ ಸರ್ಕಾರ ಅನುಮತಿ ನೀರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. 

ಉತ್ತರಪ್ರದೇಶ ಹಾಗೂ ಹರಿಯಾಣದ ರಾಜ್ಯದ ಶಿವಭಕ್ತರು ಹರಿದ್ವಾರಕ್ಕೆ ಆಗಮಿಸಿ ಗಂಗಾಜಲವನ್ನು ಶ್ರಾವಣದಲ್ಲಿ ತೆಗೆದುಕೊಂಡು ಹೋಗುವುದೇ ಕನ್ವರ್ ಯಾತ್ರೆಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com