ನವದೆಹಲಿ/ಬೆಂಗಳೂರು: ಜೂನ್ 21, ಸೋಮವಾರ ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ. ಕೊರೋನಾ ಎರಡನೇ ಅಲೆಯ ಮಧ್ಯೆ ಜನರು ಯೋಗ ಮಾಡುವುದು ಮುಂದುವರಿದಿದೆ. ಹಿಂದಿಗಿಂತ ಹೆಚ್ಚು ಉತ್ಸಾಹದಿಂದ, ಆರೋಗ್ಯ ಕಾಳಜಿಯಿಂದ ಇತ್ತೀಚೆಗೆ ಜನರು ಹೆಚ್ಚೆಚ್ಚು ಯೋಗ, ಪ್ರಾಣಾಯಾಮದ ಮೊರೆ ಹೋಗುತ್ತಿದ್ದಾರೆ.
ಕೊರೆಯುವ ಚಳಿಯ ಮಧ್ಯೆ ಇಂದು ಬೆಳ್ಳಂಬೆಳಗ್ಗೆ ಭಾರತ-ಚಿಬೆಟ್ ಗಡಿಭಾಗದಲ್ಲಿ ಸೇನಾ ಯೋಧರು ಸಮವಸ್ತ್ರ-ಜಾಕೆಟ್ ಧರಿಸಿ ಯೋಗ ಮಾಡುತ್ತಿರುವುದು ನೋಡಿದರೆ ಎಂಥವರಿಗೂ ಉತ್ಸಾಹ ಬಾರದೆ ಇರದು. ಇಂದು ಲಡಾಕ್ ಗಡಿಯಲ್ಲಿ ಗಲ್ವಾನ್ ಬಳಿ ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿದೆ.
ಇನ್ನು ಎಂದಿನಂತೆ ಬೆಳ್ಳಂಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿಯಾದಿಯಾಗಿ ಕೇಂದ್ರದ ಸಚಿವರು, ಸಂಸದರು ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನ ಮುಂದೆ ರಾಷ್ಟ್ರಪತಿಗಳು ಯೋಗಾಭ್ಯಾಸ ನಡೆಸಿದರು. ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ದೆಹಲಿಯಲ್ಲಿ ತಮ್ಮ ಪತ್ನಿ ಉಷಾ ಜೊತೆಗೂಡಿ ಬೆಳಗ್ಗೆ ಯೋಗಾಭ್ಯಾಸ ನಡೆಸಿದರು.
ದೆಹಲಿಯ ಮಹಾರಾಜ ಅಗ್ರಸೇನ ಪಾರ್ಕ್ ನಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ಯೋಗ ಮಾಡಿದರು. ದೆಹಲಿಯ ಕೆಂಪು ಕೋಟೆ ಬಳಿ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಯೋಗ ನಡೆಸಿದರು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಚಂಡೀಗಢದಲ್ಲಿ ಯೋಗಾಭ್ಯಾಸದಲ್ಲಿ ತೊಡಗಿಕೊಂಡರು.
ಜಮ್ಮು-ಕಾಶ್ಮೀರದಲ್ಲಿ ಸಿಆರ್ ಪಿಎಫ್ ಯೋಧರು ಬೆಳ್ಳಂಬೆಳಗ್ಗೆಯೇ ಯೋಗನಿರತರಾಗಿದ್ದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ರಾಜಕೀಯ ನಾಯಕರು, ಗಣ್ಯರು, ಸೆಲೆಬ್ರಿಟಿಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಶುಭಾಶಯ ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಯೋಗ ಮತ್ತು ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಿಗುವುದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
Advertisement