ತಮಿಳುನಾಡು: ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗದೆ ಮೃತಪಟ್ಟ ರೈತ

ಸಾಲ ಮರುಪಾವತಿ ಮಾಡದೇ ಇದ್ದದ್ದಕ್ಕೆ ಸ್ಥಗಿತಗೊಳಿಸಲಾಗಿದ್ದ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲಾಗದೇ ರೈತನೋರ್ವ ಮೃತಪಟ್ಟ ಘಟನೆ ತಮಿಳುನಾಡಿನ ತಿರುಪ್ಪೂರ್ ನ ಕುಲ್ಲಂಪಲಯಂ ಗ್ರಾಮದಲ್ಲಿ ನಡೆದಿದೆ.
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ತಿರುಪ್ಪುರ್: ಸಾಲ ಮರುಪಾವತಿ ಮಾಡದೇ ಇದ್ದದ್ದಕ್ಕೆ ಸ್ಥಗಿತಗೊಳಿಸಲಾಗಿದ್ದ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲಾಗದೇ ರೈತನೋರ್ವ ಮೃತಪಟ್ಟ ಘಟನೆ ತಮಿಳುನಾಡಿನ ತಿರುಪ್ಪೂರ್ ನ ಕುಲ್ಲಂಪಲಯಂ ಗ್ರಾಮದಲ್ಲಿ ನಡೆದಿದೆ.

ಮೃತ ರೈತ ಕೆ. ಕನಕರಾಜ್ ಅವರು ತಮ್ಮ ತಂದೆ 2014 ರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನಿಂದ ಪಡೆದಿದ್ದ 75,000 ರೂಪಾಯಿಗಳ ಬೆಳೆ ಸಾಲವನ್ನು ಮರುಪಾವತಿ ಮಾಡಬೇಕಿತ್ತು. ಆದರೆ ಮರುಪಾವತಿ ಮಾಡದ ಕಾರಣ ಕನಕರಾಜ್ ಅವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. 

ಕನಕ ರಾಜ್ (53) ಅವರ ತಂದೆ 2017 ರಲ್ಲಿ ಮೃತಪಟ್ಟರು, ಸಾಲ ವಾಪಸ್ ನೀಡುವ ಹೊಣೆಗಾರಿಕೆ ಕನಕರಾಜ್ ಅವರ ಹೆಗಲೇರಿತು. ಈ ನಡುವೆ 6 ವರ್ಷಗಳ ಹಿಂದೆ ಕನಕ ರಾಜ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಚಿಕಿತ್ಸೆ ಅಗತ್ಯವಿತ್ತು, ಸ್ಥಗಿತಗೊಂಡಿದ್ದ ಖಾತೆಯಲ್ಲಿದ್ದ 1.5 ಲಕ್ಷ ಹಣವನ್ನು ತೆಗೆಯಲು ಸಾಧ್ಯವಾಗದೇ ಕನಕರಾಜ್ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಕನಜ ರಾಜ್ ಅವರ ಸಹೋದರ ಆರ್. ನಾರಾಯಣ ಸ್ವಾಮಿ (56) ತಂದೆ ಮಾಡಿದ್ದ ಸಾಲದ ಮೊತ್ತವನ್ನು ಕಂತುಗಳಲ್ಲಿ ಮರುಪಾವತಿ ಮಾಡುವುದಾಗಿ ಕನಕ ರಾಜ್ ಹೇಳಿದ್ದರು. ಆದರೆ ವೈದ್ಯಕೀಯ ಖರ್ಚುಗಳು, ಲಾಕ್ ಡೌನ್ ಕಾರಣದಿಂದಾಗಿ ಸಾಧ್ಯವಾಗಿರಲಿಲ್ಲ. 

ಈ ನಡುವೆ ಬ್ಯಾಂಕ್ ನವರು ಯಾವುದೇ ನೋಟಿಸ್ ಜಾರಿಗೊಳಿಸದೇ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದರು, ವೈದ್ಯಕೀಯ ದಾಖಲೆಗಳನ್ನು ನೀಡಿ ಖಾತೆ ಮರು ಚಾಲ್ತಿ ಮಾಡುವುದಕ್ಕೆ ಪದೇ ಪದೇ ಮನವಿ ಮಾಡಿದರೂ ಬ್ಯಾಂಕ್ ನವರು ಸ್ಪಂದಿಸಲಿಲ್ಲ. ಈ ಘಟನೆಯಿಂದ ಮತ್ತಷ್ಟು ಮಾನಸಿಕ ಯಾತನೆ ಅನುಭವಿಸಿದ ಕನಕ ರಾಜ್ ಜೂನ್ ನಲ್ಲಿ ಕೊಯಂಬತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ರೈತರಿಗಾಗಿ ಇರುವ ಅಲ್ಲಿನ ಕಾಟ್ಚಿ ಸಾರ್ಪತ್ರ ತಮಿಳಗ ವಿವಸಾಯಿಗಳ್ ಸಂಘಮ್ ನ ಕಾರ್ಯಾಧ್ಯಕ್ಷ ಎನ್ ಎಸ್ ಪಿ ವೇಟ್ರಿ ಈ ಬಗ್ಗೆ ಮಾಹಿತಿ ನೀಡಿದ್ದು, ಕನಕ ರಾಜ್ ಆಸ್ಪತ್ರೆಗೆ ದಾಖಲಾದ ಬಳಿಕ ಬ್ಯಾಂಕ್ ನವರಿಗೆ ಖಾತೆ ಮರು ಚಾಲ್ತಿ ಮಾಡುವಂತೆ ಆಗ್ರಹಿಸಿದೆವು, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆವು. ಬ್ಯಾಂಕ್ ವ್ಯವಸ್ಥಾಪಕ ಸುಂದರ ಮೂರ್ತಿ ಸಹ ಭರವಸೆ ನೀಡಿದ್ದರು. ಆದರೆ ಅದು ಆಗಲಿಲ್ಲ" ಎಂದು ಹೇಳಿದ್ದಾರೆ. 

ತಿರುಪ್ಪೂರ್ ನ ಜಿಲ್ಲಾ ಮ್ಯಾನೇಜರ್ ಅಲೆಕ್ಸಾಂಡರ್ ಈ ಬಗ್ಗೆ ಮಾತನಾಡಿದ್ದು, ಸಂಬಂಧಪಟ್ಟ ಶಾಖೆಯ ಜೊತೆ ನಾನು ಮಾತನಾಡಿದೆ. ಬ್ಯಾಂಕ್ ಖಾತೆಯನ್ನು ಮರು ಚಾಲ್ತಿ ಮಾಡಲಾಗಿದೆ ಎಂಬ ಪ್ರತಿಕ್ರಿಯೆ ಬಂದಿತು. ಆದರೆ ಕುಟುಂಬ ಸದಸ್ಯರು ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡಿಲ್ಲ ಎನಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com