ನವದೆಹಲಿ: "ಮುಗ್ಧ" ಭಾರತೀಯ ಮೀನುಗಾರನ ಹತ್ಯೆಗೆ ಸಂಬಂಧಿಸಿದಂತೆ ಭಾರತ ಸೋಮವಾರ ಪಾಕಿಸ್ತಾನದ ಹೈಕಮಿಷನ್ನ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿ, ತೀವ್ರ ಪ್ರತಿಭಟನೆ ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶನಿವಾರ ಅರಬ್ಬಿ ಸಮುದ್ರದಲ್ಲಿ ಭಾರತೀಯ ಮೀನುಗಾರಿಕಾ ದೋಣಿಯ ಮೇಲೆ ಪಾಕಿಸ್ತಾನಿ ಕಡಲ ಭದ್ರತಾ ಸಿಬ್ಬಂದಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಮೀನುಗಾರ ಮೃತಪಟ್ಟಿದ್ದಾರೆ ಮತ್ತು ಮತ್ತೊಬ್ಬ ಮೀನುಗಾರ ಗಾಯಗೊಂಡಿದ್ದಾರೆ.
"ಈ ಸಂಬಂಧ ಭಾರತೀಯ ವಿದೇಶಾಂಗ ಸಚಿವಾಲಯ ಇಂದು ಪಾಕಿಸ್ತಾನದ ಹೈಕಮಿಷನ್ನ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕರೆದು ಪಾಕಿಸ್ತಾನದ ಕಡೆಯಿಂದ ಭಾರತೀಯ ಮೀನುಗಾರರ ಮೇಲೆ ನಡೆದ ಅಪ್ರಚೋದಿತ ಗುಂಡಿನ ದಾಳಿಯನ್ನು ಖಂಡಿಸಿದೆ ಮತ್ತು ಘಟನೆಯ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ.
ಎಲ್ಲಾ ಸ್ಥಾಪಿತ ಅಂತರರಾಷ್ಟ್ರೀಯ ನಿಯಮಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ವಿರುದ್ಧವಾಗಿ ಭಾರತೀಯ ಮೀನುಗಾರಿಕಾ ದೋಣಿಯ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಜೀವಹಾನಿ ಉಂಟುಮಾಡಿರುವ ಪಾಕಿಸ್ತಾನಿ ಭದ್ರತಾ ಪಡೆಯ ಕ್ರಮವನ್ನು ಭಾರತ ಭಾರತ ಸರ್ಕಾರ ಖಂಡಿಸಿದೆ ಎಂದು ಮೂಲಗಳು ತಿಳಿಸಿವೆ.
Advertisement