ತಿರುಮಲ: ಪ್ರವಾಹದ ವೇಳೆ ದರ್ಶನ ಮಿಸ್ ಮಾಡಿಕೊಂಡ ಭಕ್ತರಿಗೆ ಪ್ರತ್ಯೇಕ ಸಮಯ ನಿಗದಿ ಮಾಡಿದ TTD

ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿ ಪ್ರವಾಹದಿಂದಾಗಿ ದರ್ಶನ (Tirumala Darshan) ಮಿಸ್ ಮಾಡಿಕೊಂಡ ಭಕ್ತರಿಗಾಗಿ ತಿರುಪತಿ ತಿರುಮಲ ದೇವಸ್ಥಾನಮ್ಸ್ ಮಂಡಳಿ (TTD) ಪರ್ಯಾಯ ವ್ಯವಸ್ಥೆ ಮಾಡಿದ್ದು, ಬೇರೆ ಸಮಯ ನಿಗದಿ ಮಾಡಿದೆ.
ತಿರುಮಲದಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)
ತಿರುಮಲದಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)

ತಿರುಮಲ: ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿ ಪ್ರವಾಹದಿಂದಾಗಿ ದರ್ಶನ (Tirumala Darshan) ಮಿಸ್ ಮಾಡಿಕೊಂಡ ಭಕ್ತರಿಗಾಗಿ ತಿರುಪತಿ ತಿರುಮಲ ದೇವಸ್ಥಾನಮ್ಸ್ ಮಂಡಳಿ (TTD) ಪರ್ಯಾಯ ವ್ಯವಸ್ಥೆ ಮಾಡಿದ್ದು, ಬೇರೆ ಸಮಯ ನಿಗದಿ ಮಾಡಿದೆ.

ಪ್ರವಾಹ ಏರ್ಪಟ್ಟ ನವೆಂಬರ್ 18 ಮತ್ತು 30 ರ ನಡುವೆ ತಮ್ಮ ದರ್ಶನದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದ ಮತ್ತು ತಿರುಮಲ ಮತ್ತು ತಿರುಪತಿಯಲ್ಲಿ ಪ್ರತಿಕೂಲ ಹವಾಮಾನದ ಕಾರಣ ಅದನ್ನು ಮಾಡಲು ಸಾಧ್ಯವಾಗದ ಯಾತ್ರಾರ್ಥಿಗಳಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಪರ್ಯಾಯ ಟೈಮ್ ಸ್ಲಾಟ್‌ಗಳನ್ನು ಒದಗಿಸಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ (YV Subba Reddy, President of TTD) ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಕೆಎಸ್ ಜವಾಹರ್ ರೆಡ್ಡಿ (Executive Officer KS Jawahar Reddy) ನಿರ್ಧಾರ ಕೈಗೊಂಡಿದ್ದಾರೆ. ದರ್ಶನವನ್ನು ಕಳೆದುಕೊಂಡ ಯಾತ್ರಾರ್ಥಿಗಳು ಡಿಸೆಂಬರ್‌ನಿಂದ ಆರು ತಿಂಗಳೊಳಗೆ ಟಿಟಿಡಿ ಒದಗಿಸುವ ಪರ್ಯಾಯ ಸಮಯದ ಸ್ಲಾಟ್‌ಗಳನ್ನು ಪಡೆಯಬಹುದು. ಇದಕ್ಕಾಗಿ ಟಿಟಿಡಿ ವಿಶೇಷ ಸಾಫ್ಟ್‌ವೇರ್ ರೂಪಿಸಲಿದೆ ಎಂದು ಮಾಹಿತಿ ನೀಡಿದರು.

ಸೋಮವಾರ ಅನ್ನಮಯ್ಯ ಭವನದಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ(TTD Additional Executive Officer AV Dharma Reddy), ಯಾತ್ರಾರ್ಥಿಗಳು ತಮ್ಮ ಹಳೆಯ ಟಿಕೆಟ್ ಸಂಖ್ಯೆಯನ್ನು ಹೊಸ ಸಾಫ್ಟ್‌ವೇರ್‌ನಲ್ಲಿ ನಮೂದಿಸುವ ಮೂಲಕ ತಿರುಮಲ(Tirumala)ಕ್ಕೆ ತಮ್ಮ ತೀರ್ಥಯಾತ್ರೆಯ ದಿನಾಂಕವನ್ನು ಮರು ನಿಗದಿಪಡಿಸಬೇಕಾಗಿದೆ.

ಇದು ನವೆಂಬರ್ 30 ರಿಂದ ಲಭ್ಯವಿರುತ್ತದೆ. ತಿರುಮಲದಲ್ಲಿರುವ ಒಟ್ಟು 7,000 ಕೊಠಡಿಗಳಲ್ಲಿ ನಾರಾಯಣಗಿರಿ ವಿಶ್ರಾಂತಿ ಗೃಹದಲ್ಲಿ ಕೇವಲ ಎರಡು ಕೊಠಡಿಗಳು ಮಾತ್ರ ಪ್ರವಾಹದಿಂದಾಗಿ ಹಾನಿಗೊಳಗಾಗಿವೆ. ಉಳಿದೆಲ್ಲ ಕೊಠಡಿಗಳು ಸುಭದ್ರವಾಗಿವೆ ಎಂದು ಹೆಚ್ಚುವರಿ ಇಒ ತಿಳಿಸಿದ್ದಾರೆ. ಹಾನಿಗೊಳಗಾದ ಎರಡು ಕೊಠಡಿಗಳನ್ನು ಆದಷ್ಟು ಬೇಗ ದುರಸ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಭಾರೀ ಮಳೆಯಿಂದಾಗಿ ತಿರುಮಲಕ್ಕೆ ತೆರಳುವ ಎರಡು ಯಾತ್ರಾರ್ಥಿ ಮಾರ್ಗಗಳ ಪೈಕಿ ಶ್ರೀವಾರಿ ಮೆಟ್ಟು ಮಾರ್ಗವು ತೀರಾ ಹದಗೆಟ್ಟಿದೆ. ಆದರೆ ಅಲಿಪಿರಿ ಮಾರ್ಗಕ್ಕೆ ಯಾವುದೇ ತೊಂದರೆಯಾಗಿಲ್ಲ. ಶ್ರೀವಾರಿ ಮೆಟ್ಟು ದುರಸ್ತಿ ಕಾರ್ಯಕ್ಕೆ ಸಮಯ ಹಿಡಿಯುವ ಕಾರಣ ತಾತ್ಕಾಲಿಕವಾಗಿ ಆ ರಸ್ತೆಯನ್ನು ಮುಚ್ಚಲಾಗಿದೆ. ಯಾತ್ರಾರ್ಥಿಗಳು ಈಗ ಯಾವುದೇ ಭಯವಿಲ್ಲದೆ ತಿರುಮಲಕ್ಕೆ ಭೇಟಿ ನೀಡಬಹುದು, ಏಕೆಂದರೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಟಿಟಿಡಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. 

ತಿರುಮಲದಲ್ಲಿ ಮತ್ತೆ ಯಾತ್ರಿಕರಿಂದ ದರ್ಶನ
ಇನ್ನು ತಿರುಮಲದಲ್ಲಿ ಭಕ್ತರ ದಂಡು ಮುಂದುವರಿದಿದ್ದು, ಸೋಮವಾರ 17,531 ಭಕ್ತಾದಿಗಳು ತಿರುಮಲ ಶ್ರೀಗಳ ದರ್ಶನ ಪಡೆದು, ನಮನ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನದ ಪ್ರಕಾರ ಶ್ರೀವಾರಿ ಹುಂಡಿ ಆದಾಯ ನಿನ್ನೆ 1.49 ಕೋಟಿ ರೂ ಗಳಾಗಿತ್ತು. ಅಂತೆಯೇ ನಿನ್ನೆ 8,483 ಭಕ್ತಾದಿಗಳು ಸ್ವಾಮಿಗೆ ಮುಡಿ ಅರ್ಪಿಸಿ, ನಮನ ಸಲ್ಲಿಸಿದ್ದಾರೆ ಎಂದು ಟಿಟಿಡಿ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com