ಗಡಿಯಲ್ಲಿ ನಮ್ಮ ಸೈನಿಕರು ಸಾಯುತ್ತಿದ್ದಾರೆ, ನೀವು ಟಿ20 ಆಡುತ್ತೀರಾ?: ಅಸಾದುದ್ದೀನ್ ಓವೈಸಿ

ನಮ್ಮ ಸೈನಿಕರು ಮೃತಪಟ್ಟಿದ್ದಾರೆ. ಮತ್ತೆ ನೀವು ಟಿ20 ಆಡುತ್ತೀರಾ? ಪಾಕಿಸ್ತಾನವು ಕಾಶ್ಮೀರದಲ್ಲಿ ಭಾರತದ ಜನರ ಜೀವಗಳೊಂದಿಗೆ ಪ್ರತಿ ದಿನವೂ 20-20 ಆಡುತ್ತಿದೆ' ಎಂದು ದೂರಿದ್ದಾರೆ.
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಹೈದರಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಸೇನಾ ಸಿಬ್ಬಂದಿ ಬಲಿಯಾದ ಘಟನೆಗಳ ಬಗ್ಗೆ ಪ್ರಸ್ತಾಪಿಸಿರುವ ಅಸಾದುದ್ದೀನ್ ಓವೈಸಿ, 'ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಒಂಬತ್ತು ಸೈನಿಕರು ಮೃತಪಟ್ಟಿದ್ದಾರೆ. ಆದರೆ ಅತ್ತ ಅಕ್ಟೋಬರ್ 24ರಂದು ಭಾರತವು ಪಾಕಿಸ್ತಾನದ ವಿರುದ್ಧ ಟ್ವೆಂಟಿ-20 ಆಡುತ್ತಿದೆ' ಎಂದು ಕಿಡಿಕಾರಿದರು.

ತೆಲಂಗಾಣದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, 'ನಮ್ಮ ಸೈನಿಕರು ಮೃತಪಟ್ಟಿದ್ದಾರೆ. ಮತ್ತೆ ನೀವು ಟಿ20 ಆಡುತ್ತೀರಾ? ಪಾಕಿಸ್ತಾನವು ಕಾಶ್ಮೀರದಲ್ಲಿ ಭಾರತದ ಜನರ ಜೀವಗಳೊಂದಿಗೆ ಪ್ರತಿ ದಿನವೂ 20-20 ಆಡುತ್ತಿದೆ' ಎಂದು ದೂರಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಅ. 24ರಂದು ಟ್ವೆಂಟಿ20 ವಿಶ್ವಕಪ್‌ನ ಪಂದ್ಯ ನಡೆಯಲಿದೆ. ಯುಎಇಯಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಟೂರ್ನಿಯಲ್ಲಿನ ಭಾರತ-ಪಾಕ್ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ

ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ಸಾಲು ಸಾಲು ಹತ್ಯೆಗಳ ಬಗ್ಗೆ ಮಾತನಾಡಿದ ಅಸಾದುದ್ದೀನ್ ಓವೈಸಿ, ಇದು ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವೈಫಲ್ಯ ಎಂದು ಟೀಕಾಪ್ರಹಾರ ನಡೆಸಿದರು. ಬಿಹಾರದ ಬಡ ಕೆಲಸಗಾರರನ್ನು ಸಾಯಿಸಲಾಗುತ್ತಿದೆ. ಗುರಿಯಾಗಿಸಿ ಹತ್ಯೆಗಳನ್ನು ಮಾಡಲಾಗುತ್ತಿದೆ. ಗುಪ್ತಚರ ಇಲಾಖೆ ಮತ್ತು ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಇದು ಕೇಂದ್ರ ಸರ್ಕಾರದ ವೈಫಲ್ಯ' ಎಂದು ಟೀಕಿಸಿದರು.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಹಾಗೂ ಪುಲ್ವಾಮಾ ಜಿಲ್ಲೆಗಳಲ್ಲಿ ಶನಿವಾರ ಉಗ್ರರು ಒಂದರ ಹಿಂದೊಂದರಂತೆ ನಡೆಸಿದ ದಾಳಿಗಳಲ್ಲಿ ಬಿಹಾರದ ಬೀದಿ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಕಾರ್ಮಿಕನನ್ನು ಹತ್ಯೆ ಮಾಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಪಸಂಖ್ಯಾತ ನಾಗರಿಕರನ್ನು ಗುರಿಯನ್ನಾಗಿಸಿ ನಿರಂತರ ದಾಳಿಗಳು ನಡೆಯುತ್ತಿವೆ. ಇನ್ನೊಂದೆಡೆ ಭಾರಿ ಸಂಖ್ಯೆಯಲ್ಲಿ ಉಗ್ರರು ದೇಶದೊಳಗೆ ನುಗ್ಗಿದ್ದು, ಅವರೊಂದಿಗೆ ಸೇನಾ ಪಡೆಗಳು ಸತತ ಎನ್‌ಕೌಂಟರ್‌ಗಳಲ್ಲಿ ತೊಡಗಿವೆ. ಅವುಗಳಲ್ಲಿ ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿವೆ.

ಪ್ರಧಾನಿ ಮೋದಿ ಅವರು ಎರಡು ವಿಷಯಗಳ ಬಗ್ಗೆ ಮಾತನಾಡುವುದಿಲ್ಲ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಏರಿಕೆ ಹಾಗೂ ಲಡಾಖ್‌ನ ನಮ್ಮ ಪ್ರದೇಶದ ಒಳಗೆ ಚೀನಾ ಕುಳಿತುಕೊಂಡಿರುವುದು. ಚೀನಾ ಬಗ್ಗೆ ಮಾತನಾಡಲು ನಮ್ಮ ಪ್ರಧಾನಿ ಹೆದರುತ್ತಾರೆ' ಎಂದು ಓವೈಸಿ ವ್ಯಂಗ್ಯವಾಡಿದರು.  ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಬೆಲೆಗಳಲ್ಲಿ ಏರಿಕೆ ಹಾಗೂ ಲಡಾಖ್‌ನಲ್ಲಿ ಚೀನಾ ಪಡೆಗಳು ತಳವೂರಿದ್ದರ ಕುರಿತು ಎಂದಿಗೂ ಮಾತನಾಡುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com