ಭುವನೇಶ್ವರ್: ಲಕ್ಕಿಂಪುರ್ ಖೇರಿ ಹಿಂಸಾಚಾರದಲ್ಲಿ ಕೇಂದ್ರ ಸಚಿವರ ಪುತ್ರನ ಕೈವಾಡ ಆರೋಪ ಹಿನ್ನೆಲೆಯಲ್ಲಿ
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿರುವ ಘಟನೆ ಇಲ್ಲಿನ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಚೌಕ ಬಳಿ ಭಾನುವಾರ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವರು ಆಗಮಿಸಿದಾಗ ಈ ಘಟನೆ ನಡೆದಿದೆ. ಒಡಿಶಾ ಭೇಟಿ ಬೇಡ ಎಂದು ಈ ಹಿಂದೆಯೇ ಸೂಚನೆ ನೀಡಿದ್ದೇವು. ಮೊಟ್ಟೆಗಳನ್ನು ಎಸೆಯುವ ಮೂಲಕ ಸಚಿವರ ಭೇಟಿಗೆ ಛತ್ರ ಕಾಂಗ್ರೆಸ್ ವಿರೋಧಿಸಿದೆ. ಅವರ ಭೇಟಿ ವೇಳೆಯಲ್ಲಿ ಇತರ ಕಡೆಯೂ ಅವರು ಕಾಣಿಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆ ಎಂದು ಎನ್ ಎಸ್ ಯುಐ ರಾಜ್ಯ ಘಟಕದ ಅಧ್ಯಕ್ಷ ಯಾಸಿರ್ ನವಾಜ್ ಹೇಳಿದ್ದಾರೆ.
ಲಕ್ಕೀಂಪುರ್ ಖೇರ್ ಘಟನೆಯಲ್ಲಿ ಅವರ ಪುತ್ರ ತೊಡಗಿಸಿಕೊಂಡಿರುವ ಆರೋಪ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನವಾಜ್ ಒತ್ತಾಯಿಸಿದ್ದಾರೆ.
ಅಕ್ಟೋಬರ್ ಮೂರರಂದು ಉತ್ತರ ಪ್ರದೇಶದ ಲಕ್ಕೀಂಪುರ್ ಖೇರಿಯಲ್ಲಿ ಸಂಭವಿಸಿದ ನಾಲ್ವರು ರೈತರ ಹತ್ಯೆ ಪ್ರಕರಣ ಸಂಬಂಧ ದಾಖಲಾಗಿರುವ ಎಫ್ ಐಆರ್ ನಲ್ಲಿ ಆಶಿಶ್ ಮಿಶ್ರಾ ಅವರ ಹೆಸರಿದೆ.
Advertisement