ನವದೆಹಲಿ: ಭಾರತಕ್ಕೆ ಕೊರೋನಾ ಕಾಲಿಟ್ಟು ವ್ಯಾಪಿಸಿ ಲಾಕ್ ಡೌನ್ ಹೇರಿಕೆಯಾಗಿ, ಜನತಾ ಕರ್ಫ್ಯೂ ಆಗಿ ಒಂದು ವರ್ಷ ಕಳೆದಿದೆ. ಸರಿಯಾಗಿ ಒಂದು ವರ್ಷ ಹಿಂದೆ ಲಕ್ಷಾಂತರ ಮಂದಿ ಭಾರತೀಯರು ಮನೆಯಲ್ಲಿರುವ ದೀಪಗಳನ್ನು ಆರಿಸಿ ಮೊಂಬತ್ತು ಹಚ್ಚಿ, ನಂದಾದೀಪ ಹಚ್ಚಿ ಕೊರೋನಾ ಸೋಂಕಿನ ಆರಂಭದ ದಿನಗಳಲ್ಲಿ ಸೌಹಾರ್ದಯುತವಾಗಿ ಕೊರೋನಾ ವಾರಿಯರ್ಸ್ ಗೆ ದೇಶದ ಜನ ಕೃತಜ್ಞತೆ ಸಲ್ಲಿಸಿದ್ದರು.
ಕಟ್ಟುನಿಟ್ಟಿನ ಲಾಕ್ ಡೌನ್, ಲಾಕ್ ಡೌನ್ ಸಡಿಲಿಕೆ, ನಂತರ ಸ್ಥಿತಿಗತಿಗಳು ಸಹಜತೆಗೆ ಬಂದ ನಂತರ ಕೋವಿಡ್ ಲಸಿಕೆ ಬಂತು. ಇದೀಗ ಬೃಹತ್ ಪ್ರಮಾಣದಲ್ಲಿ ಕೊರೋನಾ ಲಸಿಕೆಯನ್ನು 45 ವರ್ಷಕ್ಕೆ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಆದರೆ ಕೊರೋನಾ ಎರಡನೇ ಅಲೆ ಸೃಷ್ಟಿಯಾಗಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ರಾಜ್ಯ ಸರ್ಕಾರ 10 ನಗರಗಳಲ್ಲಿ ನೈಟ್ ಕರ್ಫ್ಯೂ ಹೇರಿದೆ.
ಕಳೆದ ವರ್ಷ ಏಪ್ರಿಲ್ 10ರಂದು ಪ್ರಧಾನ ಮಂತ್ರಿಯವರು ಕೊರೋನಾ ವೈರಸ್ ವಿರುದ್ಧ ಎಲ್ಲರೂ ಸಂಘಟನಾತ್ಮಕವಾಗಿ ಸಾಮೂಹಿಕವಾಗಿ ಹೋರಾಡಲು ಕರೆ ನೀಡಿದ 5 ದಿನ ನಂತರ ದೇಶದಲ್ಲಿ ಕೊರೋನಾ ಕೇಸುಗಳು 6 ಸಾವಿರದ 761 ಇದ್ದರೆ ಸಾವಿನ ಸಂಖ್ಯೆ 206ಕ್ಕೆ ಏರಿಕೆಯಾಗಿತ್ತು.
ಇಂದು ದೇಶದಲ್ಲಿ, ನಿನ್ನೆ ಸೋಂಕಿತರ ಸಂಖ್ಯೆ 1 ಲಕ್ಷದ 45 ಸಾವಿರದ 384 ಏರಿಕೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿಯ 32 ಲಕ್ಷದ 05 ಸಾವಿರದ 926 ಇದೆ, ಮೃತರ ಸಂಖ್ಯೆ 1 ಲಕ್ಷದ 68 ಸಾವಿರದ 436 ಆಗಿದೆ. ದೆಹಲಿಯೊಂದರಲ್ಲಿಯೇ ಮೊನ್ನೆ ಶುಕ್ರವಾರ 8,500 ಹೊಸ ಕೇಸುಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ 58 ಸಾವಿರ ಕೊರೋನಾ ಕೇಸುಗಳು ವರದಿಯಾಗಿದೆ.
ಆರೋಗ್ಯ ಸಚಿವಾಲಯ ಪ್ರಕಾರ, 10 ರಾಜ್ಯಗಳಾದ ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ತಮಿಳು ನಾಡು, ಕೇರಳ, ಮಧ್ಯ ಪ್ರದೇಶ, ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.
ನಿನ್ನೆ ಒಂದೇ ದಿನ ಶೇಕಡಾ 82.82ರಷ್ಟು ಸೋಂಕು ವರದಿಯಾಗಿದೆ.
Advertisement