ಆರೋಪಗಳು ನಿಜವೇ ಆಗಿದ್ದರೆ, ಅದು ಗಂಭೀರವಾದದ್ದು: ಪೆಗಾಸಸ್ ವಿವಾದ ಕುರಿತು ಸುಪ್ರೀಂ ಕೋರ್ಟ್

ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದ ಆರೋಪಗಳು ನಿಜವೇ ಆಗಿದ್ದರೆ ನಿಜಕ್ಕೂ ಅದು ಗಂಭೀರವಾದದ್ದು ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪೆಗಾಸಸ್ ಸ್ಪೈವೇರ್
ಪೆಗಾಸಸ್ ಸ್ಪೈವೇರ್
Updated on

ನವದೆಹಲಿ: ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದ ಆರೋಪಗಳು ನಿಜವೇ ಆಗಿದ್ದರೆ ನಿಜಕ್ಕೂ ಅದು ಗಂಭೀರವಾದದ್ದು ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪೆಗಾಸಸ್ ಸ್ಪೈವೇರ್ ಪ್ರಕರಣದ ಕುರಿತು ವಿಶೇಷ ತನಿಖೆ ನಡೆಸುವಂತೆ ಕೋರಿ ಭಾರತದ ಎಡಿಟರ್ಸ್ ಗಿಲ್ಡ್ ಸಹಿತ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಾಧ್ಯಮಗಳ ವರದಿ ಸರಿಯಾಗಿದ್ದರೆ ಆರೋಪಗಳು ಗಂಭೀರವಾಗಿದೆ ಎಂದು ಹೇಳಿದೆ.

ದೇಶದ ಪ್ರಮುಖ ಪ್ರತಿಪಕ್ಷದ ನಾಯಕರು, ಪತ್ರಕರ್ತರು ಹಾಗೂ ಇತರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶದ ಮೂಲಕ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ಆರೋಪ ಇದೀಗ ದೇಶವ್ಯಾಪಿ ವ್ಯಾಪಕ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಭಾರತದ  ಎಡಿಟರ್ಸ್ ಗಿಲ್ಡ್ ಸಹಿತ ಹಲವರು ಸೂಕ್ತ ತನಿಖೆ ನಡೆಸುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಇಂದು, ಈ ಆರೋಪಗಳು ನಿಜವೇ ಆಗಿದ್ದರೆ ಅದುಗಂಭೀರವಾಗಿದೆ. ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಯ ಪ್ರತಿಯನ್ನು  ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಸುಪ್ರೀಂಕೋರ್ಟ್ ವಿಚಾರಣೆಗೆ ಕೇಂದ್ರವು ಹಾಜರಾಗಬೇಕು. ಸತ್ಯ ಹೊರಬರಬೇಕು. ಯಾರ ಹೆಸರುಗಳಿವೆ ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದೆ. 

ಅಂತೆಯೇ ಮಂಗಳವಾರ ಮತ್ತೊಮ್ಮೆ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಮೂರ್ತಿ ಸೂರ್ಯ ಕಾಂತ್ ಒಳಗೊಂಡ ದ್ವಿಸದಸ್ಯ ಪೀಠವು ಅರ್ಜಿಗಳ ವಿಚಾರಣೆ ನಡೆಸಿತು.

ಎರಡು ವರ್ಷಗಳ ಬಳಿಕ ಇದಕ್ಕಿದ್ದಂತೆ ಈ ವಿಚಾರ ಎತ್ತಿದ್ದೇಕೆ?
ಅರ್ಜಿಗಳ ವಿಚಾರಣೆ ವೇಳೆ ಎರಡು ವರ್ಷಗಳ ಬಳಿಕ ಇದಕ್ಕಿದ್ದಂತೆ ಈ ವಿಚಾರ ಎತ್ತಿದ್ದೇಕೆ? ಎಂದು ಸಿಜಿಐ ರಮಣ ಪ್ರಶ್ನಿಸಿದರು. 2019 ರಲ್ಲಿ ಪೆಗಾಸಸ್ ಪ್ರಕರಣ ಬೆಳಕಿಗೆ ಬಂದಿದ್ದು, ಯಾರೊಬ್ಬರೂ ಗೂಢಚರ್ಯೆವನ್ನು ಪರಿಶೀಲಿಸಲು ಯಾವುದೇ ಗಂಭೀರ ಪ್ರಯತ್ನವನ್ನು ಮಾಡದಿರುವುದು ಆಶ್ಚರ್ಯಕರವಾಗಿದೆ.  ಹೆಚ್ಚಿನ ಅರ್ಜಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಿಕೆ ತುಣುಕುಗಳನ್ನು ಆಧರಿಸಿವೆ ಎಂದು ಪೀಠ ಹೇಳಿದೆ.

ಇದಕ್ಕೆ ಉತ್ತರಿಸಿದ ಕಪಿಲ್ ಸಿಬಲ್ ಅವರು, ನಾವು ವಾಷಿಂಗ್ಟನ್ ಪೋಸ್ಟ್ ವರದಿ ಹಾಗೂ ಇತರ ಮಾಧ್ಯಮ ಸಂಸ್ಥೆಗಳಿಂದ ಇದನ್ನು ತಿಳಿದುಕೊಂಡೆವು. ಮಾಜಿ ಸುಪ್ರೀಂಕೋರ್ಟ್  ನ್ಯಾಯಾಧೀಶರು ಹಾಗೂ ಸುಪ್ರೀಂಕೋರ್ಟ್ ನ  ರಿಜಿಸ್ಟ್ರಾರ್‌ಗಳ ಫೋನ್‌ಗಳನ್ನು ಸ್ಪೈವೇರ್ ಬಳಸಿ ತಡೆಹಿಡಿಯಲಾಗಿದೆ ಎಂದು ಇಂದು  ಬೆಳಿಗ್ಗೆ ನಮಗೆ ತಿಳಿಸಲಾಯಿತು. ಸ್ಪೈವೇರ್ ಅನ್ನು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. "ಎನ್ ಎಸ್ ಒ ತಂತ್ರಜ್ಞಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೊಡಗಿಸಿಕೊಂಡಿದೆ ಎಂದು ಸಿಬಲ್ ಕೋರ್ಟ್ ಗೆ ಮಾಹಿತಿ  ನೀಡಿದರು.

ವಿಶೇಷ ತನಿಖಾ ತಂಡ ರಚನೆಗೆ ಮನವಿ
ಇನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಎರಡು ದಿನಗಳ ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ, ಸ್ಪೈವೇರ್ ಒಪ್ಪಂದದ ಬಗ್ಗೆ ಹಾಗೂ ಗುರಿಯಾಗಿರುವವರ ಪಟ್ಟಿಯ ಬಗ್ಗೆ ಸರ್ಕಾರದಿಂದ ವಿವರಗಳನ್ನು ಪಡೆಯಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಅಲ್ಲದೆ ಈ ಹಿಂದೆ, ಹಿರಿಯ ಪತ್ರಕರ್ತರಾದ ಎನ್. ರಾಮ್ ಹಾಗೂ  ಶಶಿಕುಮಾರ್ ಅವರು ಗೂಢಚರ್ಯೆ ಆರೋಪದ ಬಗ್ಗೆ ತನಿಖೆಗೆ ಮಾಜಿ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಪತ್ರಕರ್ತರ ಪರ ವಕೀಲ ಕಪಿಲ್ ಸಿಬಲ್ ಮುಖ್ಯ ನ್ಯಾಯಮೂರ್ತಿಗೆ ಅರ್ಜಿಯನ್ನು ಪಟ್ಟಿ ಮಾಡುವಂತೆ ವಿನಂತಿಸಿದ್ದರು.

ಈ ಹಿಂದೆ ಪೆಗಾಸಸ್ ಸ್ಪೈವೇರ್ ಬಳಸಿ ಕಣ್ಗಾವಲು ಮಾಡಿದ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿದೆ ಎನ್ನಲಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com