ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆ ಮುಂದುವರೆದಿದ್ದು, ಈ ವರೆಗೂ ಎನ್ ಕೌಂಟರ್ ನಲ್ಲಿ ಮೃತರಾದ ಉಗ್ರರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಂತೆಯೇ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ.
ಸುಂದರ್ ಬನಿ ಪ್ರದೇಶದ ದಡ್ಡಾಲ್ ದಟ್ಟಾರಣ್ಯದ ಉಗ್ರರು ಅಡಗಿದ್ದರು. ಈ ವೇಳೆ ಸೇನಾ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಉಗ್ರರು ಪರಾರಿಯಾಗುವ ಯತ್ನ ನಡೆಸಿದ್ದರು. ಈ ವೇಳೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದ ಸೇನಾಪಡೆಗಳು 6 ಉಗ್ರರನ್ನು ಹೊಡೆದುರುಳಿಸಿದೆ. ಕಾಶ್ಮೀರದ ರಜೌರಿ, ಪುಲ್ವಾಮ ಮತ್ತು ಕುಲ್ಗಾನ್ ನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಈ ಆರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ನಿನ್ನೆ ರಾಜೌರಿ ಜಿಲ್ಲೆಯ ಸುಂದರಬಾನಿ ವಲಯದಲ್ಲಿ ಉಗ್ರರು ಭಾರತದ ಗಡಿಯೊಳಗೆ ನುಸುಳಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಆ ಪ್ರದೇಶವನ್ನು ಸುತ್ತುವರೆದು, ಎನ್ಕೌಂಟರ್ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಉಗ್ರರನ್ನು ಸದೆ ಬಡಿಯಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ರಜೌರಿಯಲ್ಲಿರುವ ಎಲ್_ಒಸಿ ಬಳಿ ಅಡಗಿದ್ದ ಉಗ್ರರ ಜಾಡು ಪತ್ತೆ ಮಾಡಿದ್ದ ಸೇನಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಸಂಜೆ ವೇಳೆ ಕಟ್ಟಡದಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ಘಟನಾ ಸ್ಥಳದಿಂದ 2 ಎಕೆ-47 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಎನ್ ಕೌಂಟರ್ ನಲ್ಲಿ ಹತರಾದ ಉಗ್ರರ ಸಂಖ್ಯೆ 6ಕ್ಕೇರಿಕೆಯಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸೇನಾಧಿಕಾರಿಗಳು ಹುತಾತ್ಮ
ಅಂತೆಯೇ ಇದೇ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಗಡಿ ನಿಯಂತ್ರಣ ರೇಖೆ (LoC) ಬಳಿ ಇತ್ತೀಚೆಗೆ ನಡೆದ ಎರಡನೇ ಎನ್ಕೌಂಟರ್ ಇದಾಗಿದ್ದು, ಎನ್ ಕೌಂಟರ್ ನಲ್ಲಿ ಎನ್ಬಿ ಸಬ್ ಶ್ರೀಜಿತ್ ಎಂ, ಮುರಪ್ರೋಲು ಜಸ್ವಂತ್ ರೆಡ್ಡಿ ಎಂಬ ಸೇನಾಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಸೇನಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕದನ ವಿರಾಮ ಉಲ್ಲಂಘನೆ
ಇನ್ನು ಕಳೆದ ಹಲವು ದಿನಗಳಿಂದ ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಳೆ ಬಳಿ ಕದನ ವಿರಾಮ ಉಲ್ಲಂಘನೆ ನಡೆಯುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನ ಮೂಲದ ಲಷ್ಕರ್-ಇ ತೊಯ್ಬಾ ಉಗ್ರ ಸಂಘಟನೆ ಕಾಶ್ಮೀರ ಕಣಿವೆಯ ಬಳಿ ಭಾರತೀಯ ವಾಯುಪಡೆಯ ನೆಲೆ ಮೇಲೆ ಡ್ರೋನ್ ದಾಳಿ ನಡೆಸಿತ್ತು.
Advertisement