ಕೋಟಾ: ಪತ್ನಿಯನ್ನು ಹತ್ಯೆಗೈದ ಪತಿ ಆಕೆಯ ಶವವನ್ನು ಬೀದಿಯಲ್ಲಿ ಎಳೆದೊಯ್ದಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಶಿಶು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದ ರಾಂಪುರದ ಭಟಪುರ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆಸಿದ್ದು ಆರೋಪಿ 40 ವರ್ಷದ ಸುನಿಲ್ ವಾಲ್ಮೀಕಿ ಅಲಿಯಾಸ್ ಪಿಂಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನಿಲ್ ಮಂಗಳವಾರ ಮಧ್ಯಾಹ್ನ ತವರು ಮನೆಗೆ ತೆರಳಿದ್ದ ಪತ್ನಿ 35 ವರ್ಷದ ಸೀಮಾ ಮತ್ತು ಒಂಬತ್ತು ತಿಂಗಳ ಮಗ ಅವಿನಾಶ್ ನನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಒಂಬತ್ತು ವರ್ಷದ ಹಿರಿಯ ಮಗ ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದರಿಂದ ಬದುಕುಳಿದಿದ್ದಾನೆ.
ಸಂಜೆ ದಂಪತಿಗಳ ನಡುವೆ ಜಗಳ ನಡೆಸಿದ್ದು ಸುನಿಲ್ ಕೊಡಲಿಯಿಂದ ಸೀಮಾಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ರಸ್ತೆಯಲ್ಲಿ ಹಲವು ಮೀಟರ್ ಗಳ ದೂರದವರೆಗೆ ಎಳೆದು ತಂದಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಕಲ್ಯಾಣ್ ತಿಳಿಸಿದ್ದಾರೆ. ಪತ್ನಿಯ ಶವನ್ನು ಬೀದಿಯಲ್ಲಿ 70 ರಿಂದ 80 ಮೀಟರ್ ದೂರಕ್ಕೆ ಎಳೆದು ತಂದಿದ್ದು ಇದು ಜನರಲ್ಲಿ ಭೀತಿ ಹುಟ್ಟಿಸಿದೆ ಎಂದು ಡಿಎಸ್ಪಿ ತಿಳಿಸಿದ್ದಾರೆ.
ಇನ್ನು ಘಟನೆಯಲ್ಲಿ ಅವಿನಾಶ್ ಗಾಯಗೊಂಡಿದ್ದು, ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಗುವಿಗೆ ಹೇಗೆ ಗಾಯಗಳಾಗಿವೆ ಎಂದು ಸ್ಪಷ್ಟವಾಗಿಲ್ಲ. ಮೃತ ಮಹಿಳೆ ಮತ್ತು ಮಗುವಿನ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿ ವಿರುದ್ದ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಸೀಮಾ ಮತ್ತು ಸುನಿಲ್ 15 ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ಅದರಲ್ಲಿ ಈಗ ಓರ್ವ ಮಗು ಮೃತಪಟ್ಟಿದೆ.
Advertisement