ಹಮೀರ್ ಪುರ್: ಪ್ರೀತಿಸಿದ ಯುವತಿ ಬೇರೊಬ್ಬನನ್ನು ಮದುವೆಯಾದಳು ಎಂಬ ನೋವಿನಿಂದ 20 ವರ್ಷದ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹಮೀರ್ ಪುರ್ ಜಿಲ್ಲೆಯ ಲಾಲ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಥ್ ಕೋಟ್ವಾಲಿ ಪ್ರದೇಶದ ಜಖೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 20 ವರ್ಷದ ಲಕ್ಷ್ಮೀ ಪ್ರಜಾಪತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಲಾಲ್ ಪುರ ಪೊಲೀಸ್ ಠಾಣಾ ವರಿಷ್ಛಾಧಿಕಾರಿ ಓಂ ಪ್ರಕಾಶ್ ಯಾದವ್ ಅವರು, ರಾಜಸ್ಥಾನದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಪ್ರಜಾಪತಿ ಮೊಹಾಬ ಜಿಲ್ಲೆಯ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಆಕೆ ಬೇರೊಬ್ಬನೊಂದಿಗೆ ವಿವಾಹವಾಗಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆಯೇ ತೀವ್ರವಾಗಿ ನೊಂದಿದ್ದ ಲಕ್ಷ್ಮೀ ಪ್ರಜಾಪತಿ ಬಸ್ ನಲ್ಲಿ ಮನೆಗೆ ಬಂದು ಮರಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡಿದ್ದಾನೆ. ಸಾವಿಗೂ ಮುನ್ನ ಸೆಲ್ಫಿ ತೆಗೆದುಕೊಂಡು ತನ್ನ ಕುಟುಂಬಸ್ಥರಿಗೆ ರವಾನೆ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement