ಚೆನ್ನೈ: ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಚೆನ್ನೈ ಮಹಾನಗರದ ಹಲವು ಪ್ರದೇಶಗಳಲ್ಲಿ ನೀರು ತುಂಬಿದ್ದು ನಿವಾಸಿಗಳು ಮನೆಯೊಳಗಿಂದ ಅಗತ್ಯ ಕೆಲಸಗಳಿಗೂ ಹೊರಗೆ ಬರಲಾಗದ ಸ್ಥಿತಿಯಲ್ಲಿದ್ದಾರೆ. ಚೆನ್ನೈಯ ಪ್ರಮುಖ ಭಾಗಗಳಾದ ಟಿ ನಗರ್, ಅಶೋಕ್ ನಗರ್, ಕೆ ಕೆ ನಗರ್ ಮತ್ತು ಟೈನಂಪೆಟ್ ಗಳಲ್ಲಿ ಪ್ರವಾಹವೇ ಉಂಟಾಗಿದೆ.
ಟೈನಂಪೆಟ್ ನಲ್ಲಿ ಇಂದು ಬೆಳಗ್ಗೆಯಿಂದ ಮಳೆ ಸ್ವಲ್ಪ ಕಡಿಮೆಯಾಗಿರುವುದರಿಂದ ಜನಜೀವನ, ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಬಂದಿದೆ.
ನಿನ್ನೆ ಒಂದೇ ದಿನ ನಗರದ 502 ರಸ್ತೆಗಳು ಜಲಾವೃತವಾಗಿವೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ. ಈ ವರ್ಷ ಮಳೆಗಾಲ ಆರಂಭವಾದ ನಂತರ ಮೊನ್ನೆ ಬುಧವಾರದವರೆಗೆ ಚೆನ್ನೈಯಲ್ಲಿ 100ಕ್ಕೂ ಹೆಚ್ಚು ರಸ್ತೆಗಳು ಜಲಾವೃತವಾಗಿದ್ದವಷ್ಟೆ, ನಿನ್ನೆ ಒಂದೇ ದಿನ ಮಹಾನಗರ ಪಾಲಿಕೆಯ ನಾಗರಿಕ ಸಹಾಯವಾಣಿಗೆ 3 ಸಾವಿರದ 800 ದೂರುಗಳು ಬಂದಿವೆ, ಇದು ಮಳೆಗಾಲದಲ್ಲಿಯೇ ಅತಿಹೆಚ್ಚು ಬಂದ ದೂರುಗಳಾಗಿವೆ.
ಆಳ್ವಾರಪೇಟೆಯ ಸೀತಮ್ಮಳ್ ಕಾಲೋನಿ ಹಾಗೂ ನಗರದ ಇತರೆ ಪ್ರಮುಖ ಪ್ರದೇಶಗಳೂ ಜಲಾವೃತಗೊಂಡಿವೆ. ಭಾರೀ ಜಲಾವೃತಗೊಂಡಿರುವ ಚಾಮಿಯರ್ಸ್ ರಸ್ತೆಯಲ್ಲಿ, ಸಂಜೆಯ ನಂತರ ಭಾರೀ ಮಳೆಯಾಗದಿದ್ದರೆ ಮಧ್ಯರಾತ್ರಿಯೊಳಗೆ ನೀರು ತಗ್ಗುವ ನಿರೀಕ್ಷೆಯಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
"ನಾವು ನೀರನ್ನು ಪಂಪ್ ಮಾಡಿ ಅಡ್ಯಾರ್ ನದಿಗೆ ಬಿಡುತ್ತಿದ್ದೇವೆ. ನೀರಿನ ಮಟ್ಟವು ತುಂಬಾ ಹೆಚ್ಚಾಗಿದೆ. ಮುಖ್ಯಮಂತ್ರಿಗಳ ಮನೆ ಕೂಡ ಜಲಾವೃತವಾಗಿದೆ. ನೀರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೆರುಂಗುಡಿ ವಲಯ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಬುಧವಾರ ರಾತ್ರಿಯಿಂದಲೇ ಕಾರ್ಯಪ್ರವೃತ್ತರಾಗಿ ನೀರನ್ನು ಹೊರ ಹಾಕುತ್ತಿದ್ದಾರೆ. ಈ ವಲಯವು ಅಲಂದೂರಿನಂತಹ ದಕ್ಷಿಣ ವಲಯಗಳಿಂದ ಮತ್ತು ಪಲ್ಲವರಂ ಮತ್ತು ತಾಂಬರಂಗಳಿಂದ ಮಳೆನೀರನ್ನು ವಿಲೇವಾರಿ ಮಾಡುವ ಸ್ಥಳವಾದ ಪಲ್ಲಿಕರಣೈ ಜೌಗು ಪ್ರದೇಶವನ್ನು ತಲುಪುವ ಮೊದಲು ಹಾದುಹೋಗುತ್ತದೆ.
ಮಡಿಪಕ್ಕಂನ ಕೆಲವು ಪ್ರದೇಶಗಳಾದ ರಾಮ್ ನಗರ ಮತ್ತು ಪಲ್ಲಿಕರನೈ ಒಳಗಿನ ರಸ್ತೆಗಳು ನಿನ್ನೆ ರಾತ್ರಿಯಿಂದ ಜಲಾವೃತವಾಗಿವೆ. ಅಡ್ಯಾರ್, ವೇಲಚೇರಿ, ಸಾಲಿಗ್ರಾಮಂ, ಕೊಯಂಬೇಡು ಮತ್ತು ನೊಳಂಬೂರ್ ಭಾಗಗಳು ಜಲಾವೃತವಾಗಿವೆ. ಉತ್ತರದಲ್ಲಿ, ಪುಲಿಯಾಂತೋಪ್, ವ್ಯಾಸರ್ಪಾಡಿ ಮತ್ತು ಪೆರಿಯಮೆಟ್ (ರಿಪನ್ ಕಟ್ಟಡದ ಹಿಂಭಾಗ) ಪ್ರದೇಶಗಳು ಜಲಾವೃತವಾಗಿವೆ.
ಪೆರಿಯಮೆಟ್ ನಲ್ಲಿ ಬುಧವಾರದವರೆಗೂ ನೀರು ಪೂರ್ಣವಾಗಿ ಹರಿದಿಲ್ಲ, ರಾತ್ರಿ ಸುರಿದ ಮಳೆಯಿಂದ ಹದಗೆಟ್ಟಿದೆ. ಕೆಕೆ.ನಗರದ ರಾಜಮನ್ನಾರ್ ಸಾಲೈ, ಮೈಲಾಪುರದ ಶಿವಸ್ವಾಮಿ ಸಾಲೈ, ನಾಯರ್ ಪಾಯಿಂಟ್ನಿಂದ ಗಾಂಧಿ ಇರ್ವಿನ್, ಸೆಂಬಿಯಂನ ಜವಾಹರ್ ನಗರ, ಪೆರವಲ್ಲೂರಿನ 70 ಅಡಿ ರಸ್ತೆ, ಡಾ.ಅಂಬೇಡ್ಕರ್ ರಸ್ತೆ, ಪುಲಿಯಾಂತೋಪ್ ಹೈ ರೋಡ್, ಪೆರಂಬೂರ್ ಬ್ಯಾರಕ್ಸ್ ರಸ್ತೆ, ಟವರ್ ಕ್ಲಾಕ್ ಮತ್ತು ವ್ಯಾಸರಪಾಡಿಯ ಮುಲ್ಲೈನಗರ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
ಇನ್ನು ಮಧುರೈಯ ವೈಗೈ ಜಲಾಶಯದ ನೀರಿನ ಸಾಮರ್ಥ್ಯ 71 ಅಡಿಗಳಿದ್ದು ಈಗಾಗಲೇ 69 ಅಡಿ ತಲುಪಿರುವುದರಿಂದ ಪ್ರವಾಹದ ಮುನ್ನೆಚ್ಚರಿಕೆ ಹೊರಡಿಸಲಾಗಿದೆ. ರಾಣಿಪೇಟ್ ಜಿಲ್ಲೆಯ ಪೊಯ್ಯಪಕ್ಕಂನಲ್ಲಿರುವ ನಮ್ಮ ವೀಕ್ಷಣಾ ಸ್ಥಳದಲ್ಲಿ ಕಲ್ಲರ್ ನದಿಯು 'ಅತಿ ಹೆಚ್ಚು ಪ್ರವಾಹ' ಮಟ್ಟದಿಂದ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ.
Advertisement