ಲಖನೌ: ಲಖಿಂಪುರ್ ಖೇರಿ ಘಟನೆ ಸಂಬಂಧ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ, ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕಾ ಗಾಂಧಿಯವರು, ಪ್ರಜಾಪ್ರಭುತ್ವದಲ್ಲಿ ನ್ಯಾಯ ಪಡೆದುಕೊಳ್ಳುವುದು ನಮ್ಮ ಹಕ್ಕಾಗಿದೆ. ಆದರೆ, ಘಟನೆ ಸಂಬಂಧ ಇನ್ನೂ ನ್ಯಾಯ ದೊರೆತಿಲ್ಲ. ಪ್ರತಿಯೊಬ್ಬ ಪ್ರತ್ಯಕ್ಷದರ್ಶಿ ಕೂಡ ಅಜಯ್ ಮಿಶ್ರಾ ಅವರ ಮಗನನ್ನು ನೋಡಿದ್ದಾರೆ, ಗುರ್ತಿಸಿದ್ದಾರೆ, ಅವರ ಪಾತ್ರವಿದೆ ಎಂದು ಹೇಳುತ್ತಿದ್ದಾರೆ. ಪಕ್ಷಪಾತವಿಲ್ಲದ ತನಿಖೆಗಾಗಿ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ನಾನು ನಿನ್ನೆ ಭೇಟಿಯಾದ ಎಲ್ಲಾ ಸಂತ್ರಸ್ತರ ಕುಟುಂಬಗಳೂ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ತಡೆಯಲು ಸರ್ಕಾರ ಪೊಲೀಸರನ್ನು ಬಳಕೆ ಮಾಡಿಕೊಂಡಿದೆ. ಆದರೆ, ಆರೋಪಿಗಳನ್ನು ಬಂಧಿಸಲು ಬಳಸಿಲ್ಲ ಎಂದು ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಇತ್ತೀಚೆಗೆ ರೈತರ ಮೇಲೆ ನಡೆದ ಹಿಂಸಾಚಾರ ಪ್ರಕರಣದ ಸಂತ್ರಸ್ತ ಕುಟುಂಬಗಳನ್ನು ನಿನ್ನೆ ರಾತ್ರಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ಸಂತೈಸಿದರು.
ಪಾಲಿಯಾ ಗ್ರಾಮದ ಲವ್ಪ್ರೀತ್ ಸಿಂಗ್ ಎಂಬ ಮೃತ ರೈತನ ಮನೆಗೆ ಆಗಮಿಸಿದ ಉಭಯ ನಾಯಕರು ಸಂತಾಪ ಸೂಚಿಸಿದರು ಹಾಗೂ ಉಭಯ ನಾಯಕರು ಕುಟುಂಬಸ್ಥರನ್ನು ಬಿಗಿದಪ್ಪಿ ಸಾಂತ್ವನ ಹೇಳಿದರು ಹಾಗೂ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಈ ವೇಳೆ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ಕಾಂಗ್ರೆಸ್ ನೇತಾರ ದೀಪೇಂದರ್ ಹೂಡಾ ಹಾಜರಿದ್ದರು.
ನಿನ್ನೆ ಬೆಳಗ್ಗೆಯೇ ರಾಹುಲ್ ಗಾಂಧಿ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಜತೆ ಲಖನೌಗೆ ಆಗಮಿಸಿದರು. ಮೊದಲು ಇವರ ಭೇಟಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿತ್ತಾದರೂ ನಂತರ ಒತ್ತಡಕ್ಕೆ ಮಣಿದು ಅನುಮತಿ ನೀಡಿತು. ಆದರೆ ಲಖನೌ ಏರ್ಪೋರ್ಟ್ನಲ್ಲಿ ಸರ್ಕಾರ ವಿಧಿಸಿದ ಷರತ್ತು ವಿವಾದಕ್ಕೆ ಕಾರಣವಾಯಿತು.
ವಿಮಾನ ನಿಲ್ದಾಣದಲ್ಲಿದ್ದ ಪೊಲೀಸರು ರಾಹುಲ್ ಅವರಿಗೆ ‘ಪೊಲೀಸ್ ವಾಹನದಲ್ಲಿ ಲಖೀಂಪುರಕ್ಕೆ ಭೇಟಿ ಕೊಡಬೇಕು. ಖಾಸಗಿ ವಾಹನ ಬಳಸಬೇಡಿ’ ಎಂದರು. ಇದರಿಂದ ಕೋಪಗೊಂಡ ರಾಹುಲ್, ‘ನನ್ನ ಪ್ರಯಾಣವನ್ನು ನಿರ್ಧರಿಸಲು ನೀವು ಯಾರು? ನಾನು ನನ್ನ ಕಾರಿನಲ್ಲಿಯೇ ಹೋಗಲು ಬಯಸುತ್ತೇನೆ’ ಎಂದು ಹೇಳಿ ಧರಣಿ ಕುಳಿತರು.
‘ಸ್ವಂತ ಕಾರಿನಲ್ಲಿ ಹೋಗಲು 20 ದಿನವಾದರೂ ಸರಿ, ಎಷ್ಟು ದಿನವಾದರೂ ಸರಿ.. ವಿಮಾನ ನಿಲ್ದಾಣದಲ್ಲಿಯೇ ಕಾಯುವೆ’ ಎಂದು ಸವಾಲು ಹಾಕಿದರು. ಕೊನೆಗೆ ಸ್ವಂತ ವಾಹನದಲ್ಲಿ ಲಖೀಂಪುರಕ್ಕೆ ಭೇಟಿ ನೀಡಲು ರಾಹುಲ್ಗೆ ಪೊಲೀಸರು ಅನುಮತಿಸಿದರು.
ಈ ನಡುವೆ, ಸೀತಾಪುರದಲ್ಲಿ ಬಂಧನದಲ್ಲಿದ್ದ ರಾಹುಲ್ ಗಾಂಧಿ ಸೋದರಿ ಪ್ರಿಯಾಂಕಾ ಅವರನ್ನು ಪೊಲೀಸರು ಬಂಧಮುಕ್ತಗೊಳಿಸಲಾಗಿತ್ತು. ಮಾರ್ಗಮಧ್ಯೆ ರಾಹುಲ್ ಅವರು ಪ್ರಿಯಾಂಕಾ ಅವರನ್ನೂ ತಮ್ಮ ಜತೆಗೆ ಲಖೀಂಪುರಕ್ಕೆ ಕರೆದೊಯ್ದರು. ಬಳಿಕ ಪ್ರಿಯಾಂಕಾ ಹಾಗೂ ರಾಹುಲ್ ಅವರು ರಾತ್ರಿ ವೇಳೆ ಕೆಲವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದರು.
Advertisement