ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನದ ಪಂದ್ಯ ಮುಕ್ತಾಯವಾಗಿ 48 ಗಂಟೆಗಳೇ ಕಳೆದರೂ ಆ ಪಂದ್ಯದ ಫಲಿತಾಂಶದ ಬೀರಿರುವ ಪರಿಣಾಮಗಳು ಮಾತ್ರ ಮುಂದುವರೆಯುತ್ತಲೇ ಇದೆ. ಇತ್ತ ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಿದ ಶಿಕ್ಷಕಿಯೊಬ್ಬರು ಕೆಲಸ ಕಳೆದುಕೊಂಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿರುವ ನೀರ್ಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ಅವರು ಕೆಲಸ ಕಳೆದುಕೊಂಡಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ಬಳಿಕ ಶಿಕ್ಷಕಿ ನಫೀಸಾ ಅಟ್ಟಾರಿ ಅವರು, ಪಾಕಿಸ್ತಾನಿ ಕ್ರಿಕೆಟಿಗರ ಚಿತ್ರಗಳೊಂದಿಗೆ "ನಾವು ಗೆದ್ದಿದ್ದೇವೆ" ಎಂಬ ವಾಟ್ಸಾಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಶಿಕ್ಷಕಿ ನಫೀಸಾ ಅಟ್ಟಾರಿ ವಿರುದ್ಧ ಭಾರಿ ಟೀಕೆಗಳು ಎದುರಾಗಿತ್ತು. ಇದರಿಂದ ಎಚ್ಚೆತ್ತ ನೀರ್ಜಾ ಮೋದಿ ಶಾಲೆಯ ಆಡಳಿತ ಮಂಡಳಿ ಶಿಕ್ಷಕಿ ನಫೀಸಾ ಅಟ್ಟಾರಿ ಅವರನ್ನು ಕೆಲಸದಿಂದ ವಜಾ ಮಾಡಿದೆ.
"ನಮ್ಮ ಕುಟುಂಬದ ಸದಸ್ಯರು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು, ನಾವು ಎರಡೂ ತಂಡಗಳನ್ನು ಬೆಂಬಲಿಸುತ್ತೇವೆ. ಅದರರ್ಥ ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಎಂದು ಅರ್ಥವಲ್ಲ ಎಂದು ನಫೀಸಾ ಸ್ಪಷ್ಟನೆ ನೀಡಿದ್ದಾರೆ.
ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು
ಇನ್ನು ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ ಶಿಕ್ಷಕಿ ನಫೀಸಾ ವಿರುದ್ಧ ರಾಜಸ್ಥಾನದ ಉದಯಪುರದ ಅಂಬಾ ಮಾತಾ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 153 ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
Advertisement