ಬಿಲ್ಕಿಸ್ ಬಾನೊ ಪ್ರಕರಣದ 'ಭಯಾನಕ ತಪ್ಪು ನಿರ್ಧಾರ' ಸರಿಪಡಿಸಿ: 134 ಮಾಜಿ ಅಧಿಕಾರಿಗಳಿಂದ ಸಿಜೆಐಗೆ ಪತ್ರ

ಬಿಲ್ಕಿಸ್ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ 11 ಮಂದಿಯನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವುದರ ವಿರುದ್ಧ ಧನಿ ಎತ್ತಿರುವ 130 ಕ್ಕೂ ಹೆಚ್ಚು ಮಾಜಿ ನಾಗರಿಕ ಸೇವಕ ಅಧಿಕಾರಿಗಳು ಶನಿವಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಬಹಿರಂಗ ಪತ್ರ ಬರೆದು ಈ “ಭಯಾನಕ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. 
ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರದ ಅಪರಾಧಿಗಳ ಬಿಡುಗಡೆ
ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರದ ಅಪರಾಧಿಗಳ ಬಿಡುಗಡೆ

ನವದೆಹಲಿ: ಬಿಲ್ಕಿಸ್ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ 11 ಮಂದಿಯನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವುದರ ವಿರುದ್ಧ ಧನಿ ಎತ್ತಿರುವ 130 ಕ್ಕೂ ಹೆಚ್ಚು ಮಾಜಿ ನಾಗರಿಕ ಸೇವಕ ಅಧಿಕಾರಿಗಳು ಶನಿವಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಬಹಿರಂಗ ಪತ್ರ ಬರೆದು ಈ “ಭಯಾನಕ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. 

ಗುಜರಾತ್ ಸರ್ಕಾರವು ಜಾರಿಗೊಳಿಸಿದ ಬಿಡುಗಡೆ ಆದೇಶವನ್ನು ರದ್ದುಗೊಳಿಸುವಂತೆ ಮತ್ತು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಶಿಕ್ಷೆಗೊಳಗಾದ 11 ವ್ಯಕ್ತಿಗಳನ್ನು ತಮ್ಮ ಜೀವಾವಧಿ ಶಿಕ್ಷೆಯನ್ನು ಅನುಭವಿಸಲು ಮರಳಿ ಜೈಲಿಗೆ ಕಳುಹಿಸುವಂತೆ ಅವರು ಸಿಜೆಐ ಯುಯ ಲಲಿತ್ ಅವರಿಗೆ ಕೇಳಿಕೊಂಡಿದ್ದಾರೆ. "ನಮ್ಮ ದೇಶದ ಬಹುಪಾಲು ಜನರಂತೆ, ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದಂದು ಕೆಲವು ದಿನಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಘಟನೆಯಿಂದ ನಾವು ದಿಗ್ಭ್ರಮೆಗೊಂಡಿದ್ದೇವೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆ ಎಂ ಚಂದ್ರಶೇಖರ್, ಮಾಜಿ ವಿದೇಶಾಂಗ ಕಾರ್ಯದರ್ಶಿಗಳಾದ ಶಿವಶಂಕರ್ ಮೆನನ್ ಮತ್ತು ಸುಜಾತಾ ಸಿಂಗ್ ಮತ್ತು ಮಾಜಿ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ಸೇರಿದಂತೆ 134 ಮಂದಿ ಸಾಂವಿಧಾನಿಕ ನಡವಳಿಕೆ ಗುಂಪಿನ ಅಡಿಯಲ್ಲಿ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ. 

ಅಪರಾಧಿಗಳ ಬಿಡುಗಡೆಯು "ರಾಷ್ಟ್ರವನ್ನು ಆಕ್ರೋಶಗೊಳಿಸಿದೆ" ಎಂದು ಮಾಜಿ ಅಧಿಕಾರಿಗಳು ಹೇಳಿದ್ದು, ಗುಜರಾತ್ ಸರ್ಕಾರದ ಈ ನಿರ್ಧಾರದಿಂದ ನಾವು ತೀವ್ರವಾಗಿ ನೊಂದಿದ್ದೇವೆ ಮತ್ತು ಈ ಭಯಾನಕ ತಪ್ಪು ನಿರ್ಧಾರವನ್ನು ಸರಿಪಡಿಸುವ ಪ್ರಧಾನ ನ್ಯಾಯವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಮಾತ್ರ ಹೊಂದಿದೆ ಎಂದು ನಾವು ನಂಬುತ್ತೇವೆ" ಎಂದು ಪತ್ರದಲ್ಲಿ ಬರೆಯಲಾಗಿದೆ. 

2002 ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ನಂತರ ಭುಗಿಲೆದ್ದ ಗಲಭೆಯಿಂದ ತಪ್ಪಿಸಿಕೊಳ್ಳಲು ಹೊರಟಾಗ 21 ವರ್ಷದ ಬಿಲ್ಕಿಸ್ ಬಾನೋ ಐದು ತಿಂಗಳ ಗರ್ಭಿಣಿಯಾಗಿದ್ದಳು. ಸತ್ತ ಏಳು ಮಂದಿಯ ಪೈಕಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು. ಜನವರಿ 2008 ರಲ್ಲಿ, ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನೋ ಅವರ ಕುಟುಂಬದ ಏಳು ಸದಸ್ಯರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. 

15 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ, ಆರೋಪಿಗಳಲ್ಲಿ ಒಬ್ಬನಾದ ರಾಧೇಶ್ಯಾಮ್ ಶಾ ತನ್ನ ಅವಧಿಪೂರ್ವ ಬಿಡುಗಡೆಗಾಗಿ ಮನವಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ. ಈ ಉದ್ದೇಶಕ್ಕಾಗಿ ಈ ಹಿಂದೆ ಮೊಕದ್ದಮೆ ಹೂಡಿದ್ದ ಗುಜರಾತ್ ಹೈಕೋರ್ಟ್ ಪ್ರಕರಣವನ್ನು ನಿರ್ಧರಿಸಲು "ಸೂಕ್ತ ಸರ್ಕಾರ" ಮಹಾರಾಷ್ಟ್ರದ್ದು ಮತ್ತು ಗುಜರಾತ್ ಅಲ್ಲ ಎಂದು ಗಮನಿಸಿ ಅವರ ಮನವಿಯನ್ನು ವಜಾಗೊಳಿಸಿದೆ ಎಂದು ಅದು ಹೇಳಿದೆ. ನಂತರ ರಾಧೇಶ್ಯಾಮ್ ಶಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ರಾಧೇಶ್ಯಾಮ್ ಶಾ ಅವರ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್, ಅಕಾಲಿಕ ಬಿಡುಗಡೆಯ ಅರ್ಜಿಯನ್ನು ಜುಲೈ 9, 1992 ರ ತನ್ನ ನೀತಿಯ ಪ್ರಕಾರ ಎರಡು ತಿಂಗಳೊಳಗೆ ಗುಜರಾತ್ ಸರ್ಕಾರವು ಪರಿಗಣಿಸಬೇಕು ಎಂದು ಹೇಳಿದೆ.

ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಶನಿವಾರ ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗಸ್ಟ್ 25 ರಂದು, 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು ಮತ್ತು ಎರಡು ವಾರಗಳ ನಂತರ ವಿಚಾರಣೆಗೆ ಮುಂದೂಡಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com