ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: ಅಪರಾಧಿಗಳ ಬಿಡುಗಡೆ ಕುರಿತು ಬಿಜೆಪಿಯಲ್ಲಿ ಪರ-ವಿರೋಧದ ವಾದ

ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳಿಗೆ ಶಿಕ್ಷೆಯ ವಿನಾಯಿತಿ ನೀಡಿ ನಂತರ ಬಿಡುಗಡೆಯಾದ ಒಂದು ವಾರದ ನಂತರ ಆಡಳಿತಾರೂಢ ಬಿಜೆಪಿಯೊಳಗೆ ಮೊದಲ ಬಾರಿಗೆ ಪರ ವಿರೋಧದ ಗೊಣಗಾಟ ಕೇಳಿಬಂದಿದೆ.
ಖುಷ್ಬೂ ಸುಂದರ್
ಖುಷ್ಬೂ ಸುಂದರ್

ಚೆನ್ನೈ: ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳಿಗೆ ಶಿಕ್ಷೆಯ ವಿನಾಯಿತಿ ನೀಡಿ ನಂತರ ಬಿಡುಗಡೆಯಾದ ಒಂದು ವಾರದ ನಂತರ ಆಡಳಿತಾರೂಢ ಬಿಜೆಪಿಯೊಳಗೆ ಮೊದಲ ಬಾರಿಗೆ ಪರ ವಿರೋಧದ ಗೊಣಗಾಟ ಕೇಳಿಬಂದಿದೆ.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನಾನುಸಾರ ಬಿಡುಗಡೆ ಮಾಡಲಾಗಿದೆ. ಆದರೆ, ಅಪರಾಧಿಗಳನ್ನು ಸನ್ಮಾನಿಸುವುದು ಸರಿಯಲ್ಲ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದರೆ, ನಟಿ-ರಾಜಕಾರಣಿ ಖುಷ್ಬು ಸುಂದರ್, ಅತ್ಯಾಚಾರಿಗಳಿಗೆ ಕ್ಷಮೆ ನೀಡಿ ಶಿಕ್ಷೆಯಿಂದ ಬಿಡುಗಡೆ ಮಾಡಿರುವ ಕುರಿತಂತೆ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಖುಷ್ಬೂ ಅವರು, 'ಅತ್ಯಾಚಾರ, ಹಲ್ಲೆ, ಕ್ರೌರ್ಯ ಅನುಭವಿಸಿ ಜೀವನಪರ್ಯಂತ ಹೋರಾಟಕ್ಕೆ ಸಿಲುಕಿರುವ ಮಹಿಳೆಗೆ ನ್ಯಾಯ ಸಿಗಬೇಕು. ಕೃತ್ಯದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ಮುಕ್ತವಾಗಿ ಹೋಗಬಾರದು. ಹಾಗೆ ಮಾಡಿದರೆ ಅದು ಮಾನವಕುಲಕ್ಕೆ ಮತ್ತು ಹೆಣ್ಣಿಗೆ ಮಾಡಿದ ಅವಮಾನ. ಬಿಲ್ಕಿಸ್ ಬಾನು ಅಥವಾ ಯಾವುದೇ ಮಹಿಳೆಯೇ ಆಗಿರಲಿ ರಾಜಕೀಯ ಮತ್ತು ಸಿದ್ಧಾಂತಗಳನ್ನು ಮೀರಿ ಬೆಂಬಲ ನೀಡಬೇಕು, ನ್ಯಾಯ ಸಿಗಬೇಕು' ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಫಡ್ನವಿಸ್, '2002ರ ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ನಂತರವೇ ಬಿಡುಗಡೆ ಮಾಡಲಾಗಿದೆ. ಆದರೆ, ಅಪರಾಧಿಗಳನ್ನು ಸನ್ಮಾನಿಸುವುದು ಸರಿಯಲ್ಲ. ಸನ್ಮಾನಿಸದರೆ ಅದು ತಪ್ಪಾಗುತ್ತದೆ ಮತ್ತು ಇಂತಹ ಕೃತ್ಯಕ್ಕೆ ಯಾವುದೇ ರೀತಿಯ ಸಮರ್ಥನೆ ಇರುವುದಿಲ್ಲ. ಪ್ರಕರಣದ ಅಪರಾಧಿಗಳಿಗೆ ಹಾರ ಹಾಕಬಾರದಿತ್ತು' ಎಂದು ಮಂಗಳವಾರ ಹೇಳಿದ್ದರು.

ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರತಿಪಕ್ಷಗಳಿಗೆ ಉತ್ತರಿಸಿದ ಫಡ್ನವೀಸ್, 'ಮಹಿಳಾ ಸಂತ್ರಸ್ತರ ಬಗ್ಗೆ ಸೂಕ್ಷ್ಮವಾಗಿರಲು ಪೊಲೀಸ್ ಸಿಬ್ಬಂದಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು. ಆರೋಪಿಗಳನ್ನು ಆರೋಪಿಗಳಾಗಿ ಮಾತ್ರ ಪರಿಗಣಿಸಬೇಕು' ಎಂದು ಅವರು ಹೇಳಿದರು.

'ಗುಜರಾತ್‌ನ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆರೋಪಿಗಳಿಗೆ ಹಾರ ಹಾಕಿದ ಈ ಕ್ರಮವನ್ನು ನಾನು ಸಮರ್ಥಿಸುವುದಿಲ್ಲ. ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದೆ. ಅವರು ತಾವು ಮಾಡಿರುವ ಅಪರಾಧಕ್ಕಾಗಿ 14 ವರ್ಷ ಜೈಲಿನಲ್ಲಿದ್ದರು. ಆದರೆ, ಆರೋಪಿಗಳನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಅಪರಾಧಿಗಳನ್ನು ಸನ್ಮಾನಿಸಿ ಸ್ವಾಗತಿಸುವುದು ತಪ್ಪು. ಅಪರಾಧಿ ಎಂದಿಗೂ ಅಪರಾಧಿಯೇ' ಎಂದು ಗೃಹ ಸಚಿವರೂ ಆಗಿರುವ ಫಡ್ನವೀಸ್ ಹೇಳಿದ್ದಾರೆ.

2002ರ ಗೋಧ್ರಾ ರೈಲು ದಹನದ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ 21 ವರ್ಷದ ಬಿಲ್ಕಿಸ್ ಬಾನು ಅವರ ಮೇಲೆ ಮಾರ್ಚ್ 3ರಂದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈ ಸಂದರ್ಭದಲ್ಲಿ ಅವರು 5 ತಿಂಗಳ ಗರ್ಭಿಣಿ ಆಗಿದ್ದರು. ಗಲಭೆಯಲ್ಲಿ ಬಿಲ್ಕಿಸ್ ಬಾನು ಅವರ 3 ವರ್ಷದ ಮಗು ಕೂಡ ಮೃತಪಟ್ಟಿತ್ತು. ಈ ಆರೋಪದ ಮೇಲೆ 2008ರ ಜನವರಿ 21ರಂದು ಮುಂಬೈ ವಿಶೇಷ ಸಿಬಿಐ ನ್ಯಾಯಾಲಯ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು.

ಈ ಸಾಮೂಹಿಕ ಅತ್ಯಾಚಾರ ಮತ್ತು ಬಿಲ್ಕಿಸ್ ಬಾನು ಅವರ ಕುಟುಂಬದ 7 ಜನರ ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಜನ ಅಪರಾಧಿಗಳನ್ನು ಗುಜರಾತ್ ಬಿಜೆಪಿ ಸರ್ಕಾರವು ಆಗಸ್ಟ್ 15ರಂದು ಬಿಡುಗಡೆ ಮಾಡಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com